ಹೆಸರು ಬೆಳೆಗೆ ನಂಜಾಣು ರೋಗ

ಕುಷ್ಟಗಿ: ‘ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಯನ್ನು ಬಾಧಿಸುತ್ತಿರುವ ಹಳದಿ ನಂಜಾಣು ರೋಗ ಮತ್ತು ಎಲೆ ತಿನ್ನುವ ಕೀಟದ ಹಾವಳಿ ನಿಯಂತ್ರಣಕ್ಕೆ ರೈತರು ಸಾಮೂಹಿಕ ಔಷಧ ಸಿಂಪಡಣೆ ಕ್ರಮಗಳನ್ನು ಅನುರಿಸಬೇಕಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾಧಿಕಾರಿ ಡಾ.ಎಂ.ಬಿ.ಪಾಟೀಲ ಸಲಹೆ ನೀಡಿದರು.
ರೋಗ ಮತ್ತು ಕೀಟಬಾಧೆ ಹೆಚ್ಚುತ್ತಿರುವುದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲು ಮಂಗಳವಾರ ಈ ಹೋಬಳಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು, ಹೆಸರು ಬೆಳೆ ಅತ್ಯುತ್ತಮವಾಗಿದೆ. ಆದರೆ ಮುಂಚಿತವಾಗಿ ಬಿತ್ತನೆ ನಡೆಸಿರುವ ಜಮೀನುಗಳಲ್ಲಿನ ಬೆಳೆಯಲ್ಲಿ ಕೀಟದ ಹಾವಳಿ ತೀವ್ರವಾಗಿರುವುದು ಕಂಡುಬಂದಿದೆ. ಕೃಷಿ ಇಲಾಖೆ ತಜ್ಞರ ಮಾರ್ಗದರ್ಶನದೊಂದಿಗೆ ರೈತರು ವೈಜ್ಞಾನಿಕ ರೀತಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಅವರು ಹೇಳಿದರು.
ಕೀಟಗಳ ಹಾವಳಿ ಅಕ್ಕಪಕ್ಕದ ಜಮೀನಿಗೂ ವಿಸ್ತರಣೆಗೊಳ್ಳುವುದನ್ನು ತಡೆಯಲು ಕೇವಲ ಯಾರೋ ಒಬ್ಬರು ಕೀಟನಾಶಕ ಸಿಂಪಡಿಸಿದರೆ ಸಾಲದು. ಸಾಮೂಹಿಕವಾಗಿ ಏಕಕಾಲಕ್ಕೆ ಸಿಂಪಡಣೆಗೆ ಮುಂದಾಗಬೇಕು. ಹೀಗಾದಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ರೈತರಿಗೆ ವಿವರಿಸಿದರು.
ಕೀಟ ಶಾಸ್ತ್ರಜ್ಞರಾದ ಡಾ.ನಾಗೇಶ್, ಕೃತಿ ತಾಂತ್ರಿಕ ಅಧಿಕಾರಿಗಳಾದ ನಾಗನಗೌಡ ಪಾಟೀಲ, ರಾಘವೇಂದ್ರ ಕೊಂಡಗುರಿ, ತಾಂತ್ರಿಕ ಸಹಾಯಕ ಬಸವರಾಜ ಪಾಟೀಲ ಇತರರು ಈ ವೇಳೆ ಇದ್ದರು.
ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ ಕೃಷಿ ಅಧಿಕಾರಿಗಳಾದ ರಾಘವೇಂದ್ರ ಕೊಂಡಗುರಿ (9945194321), ನಾಗನಗೌಡ ಪಾಟೀಲ (8277932149) ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.