ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಭಸದ ಮಳೆ ಸುರಿದಿದ್ದು, ಹಲವು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ.
ಸುಮಾರು ಎರಡು ತಾಸು ಸುರಿದ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆ, ಮತ್ತಿತರ ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರವಾಗಿತ್ತು.
ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ ಅತ್ಯಧಿಕ ಅಂದರೆ 45.6 ಮಿ.ಮೀ ಮಳೆ ದಾಖಲಾಗಿದೆ. ಅದೇ ರೀತಿ ಹನುಮಸಾಗರದಲ್ಲಿ 18.1, ಹನುಮನಾಳದಲ್ಲಿ 7.6, ದೋಟಿಹಾಳ 4.4, ತಾವರಗೇರಾ 3.2 ಮತ್ತು ಕಿಲಾರಟ್ಟಿಯಲ್ಲಿ 1.2 ಮಿ.ಮೀ ಆಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಹನುಮನಾಳ ಹೋಬಳಿಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಜ್ಜೆ ಮತ್ತಿತರ ಬೆಳೆಗಳು ನೆಲಕ್ಕೆ ಒರಗಿದ್ದು ರೈತರಿಗೆ ಸಾಕಷ್ಟು ಹಾನಿ ಸಂಭವಿಸಿದೆ.
ತೆನೆ ಬಿಡುವ, ಕಾಳು ಕಟ್ಟುವ ಹಂತದಲ್ಲಿರುವ ಮತ್ತು ಕೊಯಿಲಿಗೆ ಬಂದಿದ್ದ ಸುಮಾರು 40-50 ಎಕರೆ ಪ್ರದೇಶದಲ್ಲಿನ ಸಜ್ಜೆ ನೆಲಕ್ಕೆ ಬಿದ್ದು ಸಂಪೂರ್ಣ ಹಾಳಾಗಿದೆ.
ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಅತ್ಯುತ್ತಮ ರೀತಿಯಲ್ಲಿ ಬೆಳೆದಿದ್ದ ಸಜ್ಜೆ ಬೆಳೆ ನೆಲಕ್ಕೆ ಬಿದ್ದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಜಹಗೀರಗುಡದೂರು ಗ್ರಾಮದ ರೈತ ಪರಸಪ್ಪ ಮಾಲಗಿತ್ತಿ ಅವರು ಅಳಲು ತೋಡಿಕೊಂಡರು.
ಮಳೆ ಗಾಳಿಯಿಂದ ಆಗಿರುವ ಬೆಳೆಹಾನಿಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದರು.
ಈ ಮಧ್ಯೆ ಬೆಳೆ ಹಾನಿ ಮಾಹಿತಿ ತಿಳಿದು ಹನುಮನಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಎಂ.ಎಸ್.ವಾಲಿ, ವಿ.ಎಂ.ಹಿರೇಮಠ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲಧಿಕಾರಿಗಳಿಗೆ ಎರಡು ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದರು.