ಗಂಗಾವತಿ: ‘ಕ್ಷಯರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಟಿಬಿ ವಿಭಾಗ, ಗಂಗಾವತಿಯ ಉಪವಿಭಾಗ ಆಸ್ಪತ್ರೆ ಮತ್ತು ಗೋ ಗ್ರೀನ್ ಸಹಯೋಗದಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ನಿರ್ಮೂಲನೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಅವುಗಳನ್ನು ಸದ್ಬಳಕೆ ಮಾಡಿಕೊಂಡು ದೇಶವನ್ನು ಕ್ಷಯಮುಕ್ತವಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಕ್ಷಯ ನಿರ್ಮೂಲನೆಗೆ ‘ಕಾಲ ಘಟಿಸುತ್ತದೆ’ ಎಂಬ ಘೋಷ ವಾಕ್ಯದ ಕ್ಷಯ ರೋಗಮುಕ್ತ ಕೊಪ್ಪಳ ಜನಾಂದೋಲನದ ಸೈಕಲ್ ಜಾಥಾಕ್ಕೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಸ್ಥಳೀಯ ಎಪಿಎಂಸಿ ಆವರಣದಿಂದ ಆರಂಭಗೊಂಡ ಸೈಕಲ್ ಜಾಥಾ, ಚನ್ನಬಸವಸ್ವಾಮಿ ಸರ್ಕಲ್, ಮಹಾವೀರ ಸರ್ಕಲ್, ಗಾಂಧಿವೃತ್ತ, ಶ್ರೀ ಕೃಷ್ಣದೇವರಾಯ ವೃತ್ತದ ಮೂಲಕ ಸಾಯಿನಗರ, ತಾಲ್ಲೂಕಿನ ಸಂಗಾಪೂರ, ಆನೆಗೊಂದಿ ಮಾರ್ಗದ ಮೂಲಕ ಅಂಜನಾದ್ರಿ ಪರ್ವತ ತಲುಪಿತು.
ಜಾಥಾದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ್ ಎಂ.ಜಿ, ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್, ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಬಿಇಒ ಸೋಮಶೇಖರ್ ಗೌಡ, ಗೋಗ್ರೀನ್ ಸಂಸ್ಥೆಯ ಅಧ್ಯಕ್ಷ ಚಿನ್ನಪಾಟೀ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೈಕಲ್ ಓಡಿಸಿ ಗಮನ ಸೆಳೆದರು.
ಜಾಥಾದ ಉದ್ದಕ್ಕೂ ಕ್ಷಯರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಕ್ಷಯ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ. ಕ್ಷಯರೋಗ ಮುಕ್ತ ಭಾರತ ಎನ್ನುವ ವಿವಿಧ ಜಾಗೃತಿಯ ಸಂದೇಶಗಳ ಫಲಕಗಳು ಗಮನ ಸೆಳೆದವು.
ಕ್ಷಯರೋಗ ವಿಭಾಗದ ಸಿಬ್ಬಂದಿ ಹುಸೇನ್ ಭಾಷಾ, ಮಲ್ಲಿಕಾರ್ಜುನ್, ಆಸ್ಪತ್ರೆಯ ಸಿಬ್ಬಂದಿಗಳಾದ ಶಿವಾನಂದ, ರಾಘವೇಂದ್ರ ಜೋಶಿ, ನಾಗರಾಜ, ಮಹಮದ್ ಇಬ್ರಾಹಿಂ, ರಾಜೀವ್, ಮಂಜುನಾಥ, ಸ್ಯಾಮವೇಲ್ ಹಾಗೂ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸೇರಿ ನಾನಾ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.