ಕನಕಗಿರಿ: ಸಮೀಪದ ಕರಡೋಣ ಗ್ರಾ.ಪಂ. ವ್ಯಾಪ್ತಿಯ ಯತ್ನಟ್ಟಿ ಗ್ರಾಮಸ್ಥರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಕರ್ನಾಟಕ ಜಾಗೃತ ರೈತ ಸಂಘದ ಆಶ್ರಯದಲ್ಲಿ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ತಿಡಿಗೋಳ ಮಾತನಾಡಿ, ಬಡವರು, ಕೂಲಿಕಾರರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮರ್ಪಕವಾಗಿ ಕೂಲಿ ಕೆಲಸ ಸಿಗದೆ ಪರದಾಡುತ್ತಿದ್ದಾರೆ. ಇಂಥವರಿಗೆ ಕೂಲಿ ಕೆಲಸ ನೀಡಲು ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದ್ದು, ಸದ್ಬಳಕೆ ಆಗುತ್ತಿಲ್ಲ ಎಂದು ದೂರಿದರು.
ಸರ್ಕಾರದ ನಿಯಮದಂತೆ ಒಬ್ಬರಿಗೆ 100 ದಿನ ಕೂಲಿ ಕೆಲಸ ನೀಡಬೇಕು. ಇಲ್ಲಿ ಬರೀ ಏಳು ದಿನಗಳ ವರೆಗೆ ಮಾತ್ರ ಕೆಲಸ ನೀಡಿದ್ದಾರೆ. ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ಕೂಲಿಕಾರರಿಗೆ ಪುಸ್ತಕ, ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ ಇತರೆ ಸೌಲಭ್ಯ ಕಲ್ಪಿಸಬೇಕು. ನಿಯಮದ ಪ್ರಕಾರ ಕೂಲಿ ಕೆಲಸ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಶಿವಪ್ಪ, ತಿಮ್ಮಪ್ಪ, ಹನುಮೇಶ, ಮುದುಕಣ್ಣ, ನಿಂಗಪ್ಪ, ನಾಗಪ್ಪ, ಪಾಮಣ್ಣ, ಹುಲಗಪ್ಪ, ಮಂಜಪ್ಪ ಇದ್ದರು. ಗ್ರಾ.ಪಂ. ಸಿಬ್ಬಂದಿ ನೂರಪಾಷಾ ಕನಕಗಿರಿ ಅವರು ಮನವಿ ಸ್ವೀಕರಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.