ಕೊಪ್ಪಳ: ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಸಮರ್ಪಕ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದಅಶೋಕ ವೃತ್ತದಲ್ಲಿ ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿದರು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ಕೇವಲ ಒಂದು ವರ್ಷದಲ್ಲಿ ಶೇ 43ರಷ್ಟುಹೆಚ್ಚಳವಾಗಿದೆ. ಕಳೆದ ವರ್ಷ ಜೂನ್ನಲ್ಲಿ 580 ಪ್ರಕರಣಗಳು ದಾಖಲಾದರೇ, ಈ ವರ್ಷ833 ಪ್ರಕರಣ ದಾಖಲಾಗಿವೆ. ಹಿಂಸೆ ಪ್ರಕರಣಗಳು ಶೇ 39ರಷ್ಟು ಹೆಚ್ಚಾಗಿವೆ. ಅಪಹರಣದ ಪ್ರಕರಣಗಳು ಕಳೆದ ವರ್ಷ 1,026 ಇದ್ದದ್ದು ಈ ವರ್ಷ 1580ಕ್ಕೆ ಏರಿಕೆಯಾಗಿವೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ಸಲ್ಮಾ ಜಹಾಂ ಆಕ್ರೋಶ ವ್ಯಕ್ತಪಡಿಸಿದರು.
ನೊಂದ ಮತ್ತು ತುರ್ತು ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿದಂತೆ ಹಲವು ರೀತಿಯ ಸಹಾಯ ಒಂದೇ ಸೂರಿನ ಅಡಿಯಲ್ಲಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು. ಆದರೆ ಸರಕಾರ ಅದನ್ನು ಕಡೆಗಣಿಸಿದೆ. ಸರ್ಕಾರ ಮಹಿಳಾ ಸುರಕ್ಷತೆಯ ಬಗ್ಗೆ ತನ್ನ ಹೊಣೆಗಾರಿಕೆ ಅರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಹಣಗಿ, ನಗರಸಭೆ ಸದಸ್ಯೆ ಸಬೀಹಾ ಪಟೇಲ್,ಆಶಾ,ವಿದ್ಯಾ ಮುದ್ದಾಬಳ್ಳಿ, ರೇಷ್ಮಾ, ಜಯಶ್ರಿ, ಪುಷ್ಪಲತಾ, ಹುಮೇರಾ ಇದ್ದರು.