ಹುಮನಾಬಾದ್: ‘ವಸ್ತು ಖರೀದಿ ವೇಳೆ ಮೋಸಗೊಂಡು ಯಾವುದೇ ಗ್ರಾಹಕರು ಕಾನೂನಿನ ನೆರವಿನ ಮೂಲಕ ನ್ಯಾಯ ಪಡೆದುಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎಂ.ಕಮತೆ ಹೇಳಿದರು.ಇಲ್ಲಿನ ಎ.ಪಿ.ಎಂ.ಸಿ ಕಚೇರಿ ಪ್ರಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಬುಧವಾರ ಸಂಜೆ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಸ್ತು ಖರೀದಿಸುವಾಗ ಕಡ್ಡಾಯ ರಸೀದಿ ಪಡೆದುಕೊಳ್ಳಲು ಮರೆಯಬಾರದು. ವಸ್ತು ಖರೀದಿ ಕುರಿತು ಅಧಿಕೃತವಾದ ದಾಖಲೆ ಇರಬೇಕು. ವಂಚನೆ ಆಗಿರುವುದು ಖಚಿತವಾದಲ್ಲಿ ಸಂಬಂಧಪಟ್ಟ ವ್ಯಾಪಾರಿಗೆ ಜೈಲು ಶಿಕ್ಷೆ ಜತೆ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶ ಇದೆ. ಈ ನಿಟ್ಟಿನಲ್ಲಿ ಗ್ರಾಹಕರು ಹಣ ಉಳಿಸುವ ನೆಪದಲ್ಲಿ ಕಳಪೆ ಅಥವಾ ಅವಧಿ ಮುಗಿದ ಸಾಮಗ್ರಿ ಖರೀದಿಸಬಾರದು. ವಸ್ತು ಉತ್ಪಾದನಾ ದಿನಾಂಕ ಪರಿಶೀಲಿಸಿ ಖರೀದಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆಸೆಪ್ಪ ಬಿ.ಸಣ್ಮನಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಗನ್ ಎಂ.ಆರ್, ವಕೀಲರ ಸಂಘದ ಅಧ್ಯಕ್ಷ ಮಹಮ್ಮದಲಿ ಗ್ರಾಹಕರ ನ್ಯಾಯಾಲಯ ಅವಶ್ಯಕತೆ ಕುರಿತು ವಿವರಿಸಿದರು. ಡಾ.ಎಂ.ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿದರು. ಎಪಿಎಂ.ಸಿ ಅಧ್ಯಕ್ಷ ಡಾ.ಭದ್ರೇಶ ಎಸ್.ಪಾಟೀಲ ಮಾತನಾಡಿ, ಪ್ರತಿ ಹಂತದಲ್ಲೂ ವಂಚಿಸುವವರು ಇರುವ ಪ್ರಸ್ತುತ ದಿನಗಳಲ್ಲಿ ಗ್ರಾಹಕರು ಯಾವತ್ತೂ ಜಾಗ್ರತೆ ವಹಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಕೆ.ವರ್ಮಾ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಎಂ.ಕುದರಿ, ವಕೀಲ ಎಲ್.ವಿ.ನಂದಿ, ದತ್ತಾರೆಡ್ಡಿ, ಸಿ.ಎಸ್.ಚನ್ನಪ್ಪ, ಎಸ್.ಯು.ಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ, ನಿರ್ದೇಶಕರು, ಸಿಬ್ಬಂದಿ, ವ್ಯಾಪಾರಿಗಳು ಹಾಗೂ ಗ್ರಾಹಕರು ಭಾಗವಹಿಸಿದ್ದರು.