ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಶೇಂಗಾ ಬೆಳೆಗೆ ಎಲೆ ಚುಕ್ಕಿ ಬಾಧೆ

ಕುಕನೂರು ವಲಯದಲ್ಲಿ ಇಳುವರಿ ಕುಸಿಯುವ ಭೀತಿ: ರೈತರಲ್ಲಿ ಆತಂಕ
Last Updated 28 ಜುಲೈ 2021, 6:39 IST
ಅಕ್ಷರ ಗಾತ್ರ

ಕುಕನೂರು: ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಶೇಂಗಾ ಬೆಳೆ ನೆಲಕಚ್ಚಿದ್ದು, ತಾಲ್ಲೂಕಿನ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಕೋವಿಡ್ ಸಮಸ್ಯೆಯಿಂದ ಗ್ರಾಮಗಳಿಗೆ ಮರಳಿದ ಯುವಕರು ವ್ಯವಸಾಯದತ್ತ ಆಸಕ್ತಿ ತೋರಿದ ಕಾರಣ ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ.

ಕೃಷಿ ಇಲಾಖೆ 33,030 ಎಕರೆ ವಿಸ್ತೀರ್ಣದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿತ್ತು. 25,729 ಎಕರೆಯಲ್ಲಿ ಬಿತ್ತನೆಯಾಗಿದೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು, ನಿರೀಕ್ಷಿತ ಬೆಳೆ ಸಿಗಲಿದೆ ಎಂದು ರೈತರು ಸಮಾಧಾನ ಪಟ್ಟುಕೊಂಡಿದ್ದರು. ಆದರೆ, ಬಿತ್ತನೆ ಮಾಡಿದಾಗಿನಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಇದು ಶೇಂಗಾ ಬೆಳೆಗಾರರಲ್ಲಿ ಆತಂಕದ ಛಾಯೆ ಮೂಡಿಸಿದೆ.

ರೋಗಕ್ಕೆ ಸಿಲುಕಿದ ಶೇಂಗಾ ಬೆಳೆಯ ಎಲೆಯಲ್ಲಿ ರಂಧ್ರಗಳು ಕಾಣಿಸುತ್ತಿವೆ. ಇದರಿಂದ ಇಳುವರಿ ಗಣನೀಯವಾಗಿ ಕುಸಿಯುತ್ತದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.

ಯರೇಹಂಚಿನಾಳ ವಲಯದ ಜಮೀನಿನ ರೈತರು ನೀರಾವರಿ ಆಶ್ರಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಸದ್ಯ 35 ರಿಂದ 40 ದಿನಗಳ ಬೆಳೆ ಇದೆ. ರೋಗ ಹತೋಟಿಗೆ ರೈತರು ಕೀಟನಾಶಕಗಳ ಸಿಂಪಡಣೆಗೆ ಮುಂದಾಗಿದ್ದಾರೆ. ಈ ಕೀಟ ಹಗಲು ಹೊತ್ತಿನಲ್ಲಿ ಭೂಮಿಯ ಆಳದಲ್ಲಿ ವಾಸಿಸಿ ರಾತ್ರಿ ವೇಳೆಯಲ್ಲಿ ಗಿಡಗಳ ಮೇಲೆ ದಾಳಿ ಮಾಡಿ ಎಲೆಗಳನ್ನು ಕತ್ತರಿಸಿ ತಿನ್ನುತ್ತದೆ. ಇದು ರೈತರ ನಿದ್ದೆ ಕಸಿದುಕೊಂಡಿದೆ.

ಹಲವೆಡೆ ರೈತರು ರಾತ್ರಿ ಹೊತ್ತಿನಲ್ಲಿ ಅಪಾಯ ಲೆಕ್ಕಿಸದೆ ಕೀಟನಾಶಕ ಸಿಂಪಡಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಒಂದು ತಿಂಗಳ ಬೆಳೆಗೆ ಈಗಾಗಲೇ 2–3 ಬಾರಿ ಸಿಂಪಡಣೆ ಮಾಡಿದ ರೈತರು ಕೀಟನಾಶಕದ ಹೆಸರಿನಲ್ಲಿ ಸಾಕಷ್ಟು ಹಣ ಸುರಿದಿದ್ದಾರೆ.

‘ಪ್ರತಿ ಕ್ವಿಂಟಲ್‌ಗೆ ₹11600 ನೀಡಿ ಶೇಂಗಾ ಬೀಜ ಖರೀದಿಸಿದ್ದೇವೆ. ರಸಗೊಬ್ಬರ, ಬಿತ್ತನೆ ಖರ್ಚು ಸೇರಿ ಸಾವಿರಾರು ರೂಪಾಯಿ ಹಣ ಸುರಿದಿದ್ದೇವೆ. ಈಗ ಹುಳುಗಳ ಬಾಧೆ ಶುರುವಾಗಿದೆ’ ಎಂದು ರೈತರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT