ಗಂಗಾವತಿ: ನಗರದಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಮುಸ್ಲಿಮ್ ಸಮುದಾಯದವರಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹ್ಮದ್ ಪೈಗಂಬರ್ ಜಯಂತಿ ಅಂಗವಾಗಿ ಗಂಗಾವತಿ ನಗರದಲ್ಲಿ ಮುಸ್ಲಿಮ್ ಸಮುದಾಯದವರು ಮೆರವಣಿಗೆ ನಡೆಸಿದ್ದರು. ಈ ವೇಳೆ ಪೊಲೀಸ್ ಇಲಾಖೆ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಣೆ ಮಾಡುತ್ತಿತ್ತು.
ಬೆಳಿಗ್ಗೆ 11.30 ಗಂಟೆ ಸುಮಾರು ಮಹಾವೀರ ವೃತ್ತದ ಒಪ್ಪೋ, ಸಂಗೀತಾ ಮೊಬೈಲ್ ಸೆಂಟರ್ ಬಳಿ ಕೆಲ ಜನರು ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜದಲ್ಲಿ ಅಶೋಕ ಚಕ್ರ ಚಿತ್ರವಿಲ್ಲದೆ, ಚಂದ್ರಾಕೃತಿ ಚಿತ್ರ ಅಳವಡಿಸಿ ಧ್ವಜವನ್ನು ತಿರುಗಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ಅವರನ್ನು ನೋಡಿದ ಕೂಡಲೇ ಆ ಸ್ಥಳದಿಂದ ಕಾಲ್ಕಿತ್ತಿದ್ದು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.