ಕೊಪ್ಪಳ: ನಗರದ ವಿವಿಧೆಡೆ ಹಲವು ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ 9ನೇ ದಿನದ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಆರಂಭವಾಗಿದೆ.
ರಾತ್ರಿ ಕೆಲ ಹೊತ್ತು ಮಳೆ ಬಂದ ಕಾರಣ ಸಂಘಟಕರು ವಿಸರ್ಜನಾ ಮೆರವಣಿಗೆ ನಡೆಯುವ ಬಗ್ಗೆ ಆತಂಕಗೊಂಡಿದ್ದರು. ಕೆಲವೇ ಹೊತ್ತಿನಲ್ಲಿ ಮಳೆ ನಿಂತಿದ್ದರಿಂದ ಸಂಘಟಕರ ಹಾಗೂ ಯುವಕರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಯಿತು.
ಗಡಿಯಾರ ಕಂಬದ ಬಳಿಯ ಗಜಾನನ ಮಿತ್ರ ಮಂಡಳಿ, ವಾರಕಾರ ಓಣಿಯ ವಿಜಯವಿನಾಯಕ ಮಿತ್ರ ಮಂಡಳಿ ಮತ್ತು ಕೋಟೆ ರಸ್ತೆಯ ವಿನಾಯಕ ಮಿತ್ರ ಮಂಡಳಿ ಸೇರಿದಂತೆ ವಿವಿಧೆಡೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಸಂಸದ ಕರಡಿ ಸಂಗಣ್ಣ ಅವರು ವಿವಿಧೆಡೆ ಭೇಟಿ ನೀಡಿ ಜನರ ಜೊತೆಗೆ ಕುಣಿದು ಸಂಭ್ರಮಿಸಿದರು.
ಡಿ.ಜೆ. ಅಬ್ಬರ ಮತ್ತು ತಮಟೆ ಸದ್ದಿಗೆ ಹಾಕಿದ ಹೆಜ್ಜೆಗೂ ಸುತ್ತಮುತ್ತಲೂ ಇದ್ದ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೂಡ ಖುಷಿ ಪಟ್ಟರು.