ಸಮ್ಮೇಳನಕ್ಕೆ ನೀಡಿದ್ದ ಪರವಾನಗಿಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ದಿಢೀರ್ ಹಿಂಪಡೆದಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಅಂಗಡಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಭಾನುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ಸಮ್ಮೇಳನ ಮುಂದೂಡಲಾಗಿದೆ ಹೊರತು ರದ್ದಾಗಿಲ್ಲ. ಸಮ್ಮೇಳನದ ಸರ್ವಾಧ್ಯಕ್ಷರೂ ಬದಲಾಗಿಲ್ಲ. ಆದರೆ ಸರ್ಕಾರದ ಸೂಚನೆಯಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದೆವು, ಐದು ನೂರು ಜನರಿಗಿಂತ ಹೆಚ್ಚಿನವರನ್ನು ಸೇರಿಸುತ್ತಿರಲಿಲ್ಲ. ಕೋವಿಡ್ ನಿಯಮಗಳ ಪ್ರಕಾರವೇ ಸಮ್ಮೇಳನ ನಡೆಸಲು, ಎಲ್ಲ ರೀತಿಯ ಸುರಕ್ಷಾ ನಿಯಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ಹೀಗಿದ್ದೂ ಪರವಾನಗಿಯನ್ನು ಹಿಂಪಡೆದಿರುವುದು ಸರಿಯಲ್ಲ’ ಎಂದು ಹೇಳಿದರು.