ಕುಷ್ಟಗಿ: ಜಿಲ್ಲಾ ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕಿನ ಹನುಮಸಾಗರದಲ್ಲಿ ಮಾ. 4 ಹಾಗೂ 5ರಂದು ಆಯೋಜಿಸಲಾಗಿದೆ.
ಸಮ್ಮೇಳನ ನಡೆಸಲು ನಿರ್ಧರಿಸಿರುವುದರ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ, ತಾಲ್ಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಗ್ರಾಮದ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಎರಡು ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಜಿಲ್ಲಾ ಸಮ್ಮೇಳನವನ್ನು ಕೋವಿಡ್ ಸಮಸ್ಯೆ ಉಂಟಾಗಿದ್ದರಿಂದ ಮುಂದೂಡಲಾಗಿತ್ತು. ಆಗ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನೇ ಮುಂದುವರೆಸಲು ಈಗಿನ ಕಾರ್ಯಕಾರಿಣಿ ಸಮಿತಿ ನಿರ್ಧರಿಸಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಜಿಲ್ಲೆಯ ಕುಕನೂರು ತಾಲ್ಲೂಕಿನ ದ್ಯಾಂಪುರದ ಡಾ.ಉದಯಶಂಕರ ಪುರಾಣಿಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಮ್ಮೇಳನಕ್ಕೆ ಸಂಬಂಧಿಸಿದ ಆಮಂತ್ರಣ ಪತ್ರಿಕೆ, ಸಿದ್ಧತೆ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು ಹನುಮಸಾಗರ ಮತ್ತು ತಾಲ್ಲೂಕಿನ ಗ್ರಾಮಸ್ಥರು ಸಹಾಯಕ, ಸಹಕಾರದೊಂದಿಗೆ ಸಮ್ಮೇಳನದ ಯಶಸ್ವಿಗೆ ಶ್ರಮಿಸುವಂತೆ ಮನವಿ ಮಾಡುವುದಾಗಿ ಹೇಳಿದರು. ಕಸಾಪ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಬೀಸಾಬ ಕುಷ್ಟಗಿ ಇತರರು ಇದ್ದರು.
ಎಲ್ಲ ಪ್ರಶಸ್ತಿಗೂ ಮಿಗಿಲು: ರಾಷ್ಟ್ರೀಯ, ಅಂತರರಾಷ್ಟ್ಟೀಯ ಮಟ್ಟದಲ್ಲಿ ಬಹಳಷ್ಟು ಗೌರವ ಸಿಕ್ಕಿರಬಹುದು. ಆದರೆ ನಮ್ಮ ಊರು, ನಮ್ಮ ಜಿಲ್ಲೆ ನಮ್ಮ ಪೂರ್ವವಿಕರು, ನಮ್ಮ ಜನ ಕೊಡುಗೆ ನೀಡಿದ ಜಾಗದಲ್ಲಿ ಸಮ್ಮೇಳನದ ಅಧ್ಯಕ್ಷತೆಯ ಮೂಲಕ ಸಿಗುವ ಗೌರವ ಬೇರೆ ಇತರೆ ಎಲ್ಲ ಗೌರವಕ್ಕಿಂತಲೂ ದೊಡ್ಡದಾಗಿದೆ. ಜನ ಪ್ರೀತಿ ವಿಶ್ವಾಸದಿಂದ ಕರೆದಿದ್ದು ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಉದಯಶಂಕರ ಪುರಾಣಿಕ ಪ್ರತಿಕ್ರಿಯಿಸಿದರು.
ಉದಯಶಂಕರ ಮೂಲತಃ ಕುಕನೂರು ತಾಲ್ಲೂಕು ದ್ಯಾಂಪುರ ಗ್ರಾಮದವರು. ಈಗ ಬೆಂಗಳೂರಿನ ನಿವಾಸಿಯಾಗಿದ್ದಾರೆ.
ಲಂಡನ್, ಅಮೆರಿಕಾ ಮತ್ತು ಸಿಂಗಾಪುರದಲ್ಲಿ ಒಟ್ಟು ಮೂರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, 36 ವರ್ಷಗಳಿಂದಲೂ ಐಟಿ ಕ್ಷೇತ್ರದಲ್ಲಿ ಕೆಲಸ, ಸದ್ಯ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ.
‘ಯಾರೊ ಒಬ್ಬರ ಸಾಧನೆ ನಿಂತ ನೀರಾಗಬಾರದು. ಯುವಕರು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಬರಬೇಕು, ಜ್ಞಾನ ವಿಸ್ತಾರಗೊಳ್ಳಬೇಕು, ಜನರು ಜಾಗೃತಿಗೊಳ್ಳುವ ಮೂಲಕ ಕೊಪ್ಪಳ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬೇಕು. ಇಂಥ ಪ್ರಚಲಿತ, ಸಮಕಾಲಿನ ವಿಷಯಗಳಿಗೂ ಸಮ್ಮೇಳನ ವೇದಿಕೆಯಾಗಬೇಕು’ ಎಂದು ಪುರಾಣಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.