ಗಂಗಾವತಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಕೋವಿಡ್ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ಹಾಗೂ ಬಾಳೆಕಂಬಗಳ ವ್ಯಾಪಾರ ಜೋರಾಗಿ ಇತ್ತು.
ನಗರದ ಗಾಂಧಿ ವೃತ್ತ, ಗಣೇಶ ಸರ್ಕಲ್, ಗುಂಡಮ್ಮ ಕ್ಯಾಂಪ್ ಹಾಗೂ ಇಸ್ಲಾಂಪುರ ಸರ್ಕಲ್ ಸೇರಿದಂತೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹಬ್ಬದ ಸಾಮಗ್ರಿ ಖರೀದಿ ಮಾಡಲು ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ದೇವಾಲಯಗಳಲ್ಲಿ ವಿಶೇಷ ಪೂಜೆ: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಉದ್ಭವ ಮಹಾಲಕ್ಷ್ಮೀ ದೇವಸ್ಥಾನ ಸೇರಿದಂತೆ ನಾನಾ ದೇಗುಲಗಳಲ್ಲಿ ಹಾಗೂ ತಾಲ್ಲೂಕಿನ ಆನೆಗುಂದಿಯ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಗಂಜ್ನಲ್ಲಿ ವ್ಯಾಪಾರಸ್ಥರು ಅದ್ದೂರಿಯಾಗಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.
ಶಾಸಕ ಪರಣ್ಣ ಮುನವಳ್ಳಿ ಅವರು ಕುಟುಂಬ ಸಮೇತರಾಗಿ ತಮ್ಮ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,‘ಕೋವಿಡ್ ನಡುವೆಯೂ ಈ ಬಾರಿ ದೀಪಾವಳಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಹಬ್ಬದ ಸಂಭ್ರಮದಲ್ಲಿ ಕೊರೊನಾ ಮಾರ್ಗ ಸೂಚಿ ಮರೆಯಬಾರದು’ ಎಂದರು.