ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ಅಂಬೇಡ್ಕರ್ ನಗರದಲ್ಲಿ ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಹೋಲುವ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರಿಶಿಷ್ಟ ಸಂಘಟನೆಯ ಹೋರಾಟಗಾರ ಹುಲಿಗಪ್ಪ ಮಾಗಿ ಅವರು ವಿನಾಯಕ ಸ್ನೇಹವೃಂದ ಯುವಕ ಮಂಡಳಿ (ಮಾದಿಗ ಸಮಾಜ) ಅಂಬೇಡ್ಕರ್ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅವರಿಗೆ ಅಪಮಾನ ಮಾಡಿದೆ ಎಂದು ದೂರಿದ್ದಾರೆ.
ಗಣೇಶ ಮೂರ್ತಿ ಕಾಲಿನಿಂದ ಕುತ್ತಿಗೆ ತನಕ ಅಂಬೇಡ್ಕರ್ ರೂಪ ಹೊಂದಿದ್ದು, ರುಂಡ ಮಾತ್ರ ಗಣೇಶನದ್ದಾಗಿದೆ. ಯುವಕ ಮಂಡಳಿ ಸದಸ್ಯರು ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಈ ರೀತಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಕೂಡಲೇ ಗಣೇಶ ಯುವಕ ಮಂಡಳಿ ಸದಸ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.