ಗಂಗಾವತಿ: ‘ಜೆಸ್ಕಾಂ ವತಿಯಿಂದ ಡಿ.14 ರಿಂದ ಡಿ.19 ರವರೆಗೆ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಸದುಪಯೋಗ ಪಡೆಯಬೇಕು’ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಂ.ನಟರಾಜ್ ಮನವಿ ಮಾಡಿದ್ದಾರೆ.
ನಗರದ ಜೆಸ್ಕಾಂ ಕಚೇರಿಯಲ್ಲಿ ಸೋಮವಾರ ಸಕಾಲ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಗಂಗಾವತಿ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಕುಷ್ಟಗಿ ಹಾಗೂ ಕಾರಟಗಿ ತಾಲ್ಲೂಕುಗಳಲ್ಲಿ ಸಪ್ತಾಹ ನಡೆಸಲಾಗುವುದು ಎಂದರು.
ನಿಗದಿತ ಕಾಲಮಿತಿಯೊಳಗೆ ಸೇವೆ ಪಡೆಯುವ ಅಧಿಕಾರವನ್ನು ಗ್ರಾಹಕರು ಹೊಂದಿದ್ದು, ಏನೇ ತೊಂದರೆಗಳು ಇದ್ದರೂ, ಅದನ್ನು ಸಕಾಲದಲ್ಲಿ ನೋಂದಾಯಿಸಿದರೆ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ಮಾತನಾಡಿ,‘ಸಕಾಲ ಸೇವೆ ಕೇವಲ ಒಂದು ಇಲಾಖೆಗೆ ಮಾತ್ರ ಸೀಮಿತವಾದದ್ದಲ್ಲ.ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಕಾಲದಲ್ಲಿ ನೋಂದಾಯಿಸುವ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಜೆಸ್ಕಾಂ ಸಕಾಲ ಸಪ್ತಾಹ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು.
ಜೆಸ್ಕಾಂನ ಎಇಇ ಎ.ಆರ್.ಸಲೀಂ, ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಕಾರ್ಮಿಕ ನಾಯಕ ಜಗನ್ನಾಥ ರಾಠೋಡ್, ಸಿಬ್ಬಂದಿಗಳಾದ ಜ್ಯೋತಿ, ಅಲ್ಲಾಭಕ್ಷಿ, ಖಾಜಾ ಮೈನುದ್ದೀನ್ ಹಾಗೂ ಎಚ್.ಬಿ.ನಾಗಲಕ್ಷ್ಮೀ ಇದ್ದರು.