ಕುಕನೂರು: ‘ಇತಿಹಾಸ ಅಧ್ಯಯನವು ನಮ್ಮ ಅರಿವಿನ ವಿಸ್ತರಣೆಗೆ ನೆರವು ನೀಡುತ್ತದೆ‘ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವಿಕುಮಾರ್ ಹೇಳಿದರು.
ಇಲ್ಲಿನ ಕೆಎಲ್ಇ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಇತಿಹಾಸ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಇತಿಹಾಸದ ಆಳವಾದ ಅಧ್ಯಯನದ ಕುರಿತು ಆಸಕ್ತಿ ಇರಬೇಕು. ಕಲಿಕೆಯ ವಿಷಯದಲ್ಲಿ ಮುಕ್ತಾಯ ಎನ್ನುವುದೇ ಇಲ್ಲ ಎಂದರು.
ಸಾಂಸ್ಕೃತಿಕ, ಆಧ್ಯಾತ್ಮಿಕ, ಪರಂಪರೆ ಅರಿತು, ಅದನ್ನು ಮನನ ಮಾಡಿಕೊಳ್ಳಬೇಕು.ಇತಿಹಾಸ ನಿರ್ಲಕ್ಷ್ಯ ಸಲ್ಲದು. ಇತಿಹಾಸ ಅಧ್ಯಯನದಿಂದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆ ಎಂದರು.
ಪ್ರಾಚಾರ್ಯ ಆರ್. ಕೆ ಕುಲಕರ್ಣಿ ಮಾತನಾಡಿ, ಪ್ರತಿದಿನ ನಾವು ಹಲವಾರು ವಿಚಾರಗಳನ್ನು ಹಿರಿಯರಿಂದ, ಅಧಿಕಾರಿಗಳಿಂದ ತಿಳಿದುಕೊಳ್ಳುತ್ತೇವೆ. ಪರಂಪರೆ ಎಂದಾಗ ನಾವು ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯ, ನಮ್ಮನ್ನು ನಾವು ಯಾರೆಂದು ಅರಿವು ಪಡೆಯುವುದು ಪರಂಪರೆಯಾಗಿದೆ ಎಂದರು.
ಮಾರುತಿ ಲಕಮಾಪೂರ, ಕೃಷ್ಣಮೂರ್ತಿ, ವೀರಶೇಖರ್ ಪತ್ತಾರ, ಗೋಪಾಲ್ ಜೋಶಿ, ಎಚ್. ಎಸ್.ಅಂಗಡಿ, ಸುಧೀಂದ್ರ ರಾವ್ ಇದ್ದರು.