ಗಂಗಾವತಿ: ‘ವರ್ತಕರ ಕುತಂತ್ರ ಮತ್ತು ಲಾಬಿಗೆ ಮಣಿದಿರುವ ಸರ್ಕಾರ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ವಿಳಂಬ ಮಾಡುತ್ತಿದೆ’ ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರಿನಿವಾಸ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ವರ್ತಕರ ನಡೆಯಿಂದ ಭತ್ತದ ದರ ಕುಸಿದಿದೆ. ಪರಿಣಾಮ ರೈತರು ಕಣ್ಣೀರು ಸುರಿಸುವಂತಾಗಿದೆ. ಭತ್ತಕ್ಕೆ ₹1,800 ಬೆಂಬಲ ಬೆಲೆ ಘೋಷಣೆ ಮಾಡಿರುವ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸಲು ವಿಳಂಬ ಮಾಡುತ್ತಿದೆ’ ಎಂದು ದೂರಿದರು.
ತಕ್ಷಣ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವ ಜತೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಭತ್ತದ ಬೆಲೆ ಅರ್ಧ ಕಡಿಮೆಯಾಗಿದೆ. 25 ಕೆ.ಜಿ ಅಕ್ಕಿ ಪ್ಯಾಕೇಟ್ ಬೆಲೆ 70 ಕೆ.ಜಿ ಭತ್ತದ ಚೀಲದ ಬೆಲೆಗೆ ಸಮಾನವಾಗಿದೆ. ಹೀಗಾದರೆ, ಭತ್ತ ಬೆಳೆದ ರೈತರು ಏನು ಮಾಡಬೇಕು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫಿ, ಪ್ರಮುಖರಾದ ಫಕೀರಯ್ಯ, ರಮೇಶ ಕುಲಕರ್ಣಿ, ಪ್ರಸಾದ ಜಂಗಮರ ಕಲ್ಗುಡಿ, ಸತ್ಯನಾರಾಯಣ, ಯಮನೂರಪ್ಪ, ವೆಂಕೋಬ ಮೇಲಸಕ್ರಿ, ವೀರನಗೌಡ, ಓಂಕಾರೆಪ್ಪ ಹಾಗೂ ಬೆಟ್ಟಪ್ಪ ಇದ್ದರು.