ಕೊಪ್ಪಳ: ತಾಲ್ಲೂಕು ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸುರಿದ ಮಳೆಯಿಂದ ಬೆಳವಿನಹಾಳ ಬಳಿ ಸೇತುವೆ ತುಂಬಿ ಹರಿದಿದೆ. ಇದರಿಂದ ಗ್ರಾಮಸ್ಥರುಸಂಚಾರಕ್ಕೆಪರದಾಡುವಂತಾಗಿದೆ.
ಇತ್ತೀಚೆಗಷ್ಟೇ ಬೆಳವಿನಹಾಳ ಬಳಿ ಎಪಿಎಂಸಿ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ. ಮೂಲ ಸೌಲಭ್ಯ ಕಲ್ಪಿಸದ ಕಾರಣ ಪ್ರಾಂಗಣದಲ್ಲಿ ನೀರು ನಿಂತು ಕೆಸರಿನ ಗದ್ದೆಯಂತಾಗಿದೆ. ಇದರಿಂದ ರೈತರು ಪರದಾಡಿದರು. ವಿವಿಧ ಕಡೆಯಿಂದ ಬಂದಿದ್ದ ವ್ಯಾಪಾರಿಗಳು ಅಧಿಕಾರಿಗಳನ್ನು ಶಪಿಸಿದರು. ಹಳ್ಳ ತುಂಬಿದ್ದರಿಂದ ಕೆಲ ಗಂಟೆ ಸಂಚಾರ ದಟ್ಟಣೆ ಉಂಟಾಯಿತು.
ಮಳೆ: ಬುಧವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ಮೋಡವಾಗಿ ರಾತ್ರಿ ವೇಳೆ ಮಳೆ ಸುರಿದಿದೆ.
ಜಿಲ್ಲೆಯ ಹುಲಿಹೈದರ ವ್ಯಾಪ್ತಿಯಲ್ಲಿ 9.4 ಮಿ.ಮೀ, ಕುಷ್ಟಗಿಯಲ್ಲಿ 4ಮಿ.ಮೀ. ಗಂಗಾವತಿಯಲ್ಲಿ 9.6 ಮಿ.ಮೀ. ಮಳೆಯಾಗಿದೆ. ಅತಿಯಾದ ತೇವಾಂಶದಿಂದ ಕುಷ್ಟಗಿ ಹಾಗೂ ಹನುಮಸಾಗರ ಭಾಗದಲ್ಲಿ ಬೆಳೆಗಳಿಗೆ ಕೊಳೆ ರೋಗ ಅಂಟಿಕೊಂಡಿದೆ.
ಕುಷ್ಟಗಿ ಹಾಗೂ ಕನಕಗಿರಿ ಭಾಗದಲ್ಲಿ ಗುರುವಾರ ಬೆಳಗಿನ ಜಾವ ಸಾಧಾರಣವಾಗಿ ಮಳೆಯಾಗಿದ್ದು, ಎಂಟು ಗಂಟೆ ನಂತರ ಬಿಡುವು ನೀಡಿದೆ. ತಾವರಗೇರಾದಲ್ಲಿ ಜೋರು ಮಳೆಯಾಗಿದೆ.