ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಯದುಣಸಿ ಗ್ರಾಮಸ್ಥರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘದ ಪ್ರಮುಖರು ಪಿಡಿಒ ರವೀಂದ್ರ ಕುಲಕರ್ಣಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಗ್ರಾಮದ ನೂರಾರು ಕುಟುಂಬಗಳು ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿದ್ದರೂ ಕೆಲಸ ಇಲ್ಲದಂತಾಗಿದೆ. ಕೂಲಿ ಕೆಲಸ ಇಲ್ಲದ ಕಾರಣ ಕೂಲಿಕಾರರು ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಗುಳೆ ತಪ್ಪಿಸಲು ಕೂಲಿ ಕೆಲಸ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕೂಲಿಕಾರರಿಗೆ ಕೆಲಸ ನೀಡದದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಿಡಿಒ ರವೀಂದ್ರ ಕುಲಕರ್ಣಿ ಮಾತನಾಡಿ,‘ಕ್ರಿಯಾ ಯೋಜನೆ ರೂಪಿಸಿ ಕೂಲಿ ಕೆಲಸ ನೀಡಲಾಗುವುದು’ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ಶಿವಶಂಕ್ರಪ್ಪ ಚೆನ್ನದಾಸರ, ಸಂಘದ ಅಧ್ಯಕ್ಷ ಭಾಗಪ್ಪ ಪೂಜಾರಿ, ಪದಾಧಿಕಾರಿಗಳಾದ ತಿರುಪತಿ ತಳವಾರ, ಯಂಕಪ್ಪ ತಳವಾರ, ಯಲ್ಲಾಲಿಂಗೇಶ, ಪಂಪಾಪತಿ ರೆಡ್ಡಿ, ಸಂಗಮೇಶ ರೆಡ್ಡಿ, ಕನಕರಾಯ ಉಡೇಜಾಲಿ, ರಾಮಣ್ಣ ಬಡಗೇರ ಹಾಗೂ ಸಂಘಟನೆಯ ಪ್ರಮುಖರು ಇದ್ದರು.