ಗಂಗಾವತಿ: ಕೀಟ ಬಾಧೆಯಿಂದ ಇಳುವರಿ ಬಾರದೆ ಭತ್ತ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಒತ್ತಾಯಿಸಿ ಸೋಮವಾರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀವಿರೂಪಾಕ್ಷೇಶ್ವರ ರೈತ ಸೇವಾ ಸಂಘ ಮನವಿ ಸಲ್ಲಿಸಿತು.
ರೈತ ಸಂಘದ ಅಧ್ಯಕ್ಷ ಕಳಕಪ್ಪ ಮಾತನಾಡಿ,‘ಈ ಬಾರಿ ತಾಲ್ಲೂಕಿನಾದ್ಯಂತ ಭತ್ತ ಬೆಳೆದ ರೈತರು ಕಣೆನೊಣ, ಕಾಡಿಗೆ ರೋಗಗಳಂಥ ಬಾಧೆಗಳಿಂದ ಸರಿಯಾದ ಇಳುವರಿ ಬಾರದೆ ಕಂಗಾಲಾಗಿದ್ದಾರೆ. ಹಾಗಾಗಿ ಸಂಕಷ್ಟಕ್ಕೀಡಾದ ರೈತರಿಗೆ ಸರ್ಕಾರ ಎಕರೆಗೆ ₹20 ಸಾವಿರದಂತೆ ಪರಿಹಾರ ಒದಗಿಸಬೇಕು. ಜತೆಗೆ ಸಾಲಮನ್ನಾ ಮಾಡುವಂತೆ ಒತ್ತಡ ಹೇರಿ ಎಂದು ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
ರೈತ ಮುಖಂಡರಾದ ಮೆಹಿಬೂಬ್, ಅಲಿಸಾಬ್, ಕಮರ್ ಪಾಷಾ, ವಲಿಸಾಬ್, ಶಹಾಬುದ್ದೀನ್, ಹುಸೇನಪ್ಪ ಹಂಚಿನಾಳ್, ಶಿವರಾಜ್, ರಮೇಶ್ ಹಾಗೂ ಖಾಜಾಸಾಬ್ ಇದ್ದರು.