ಕನಕಗಿರಿ: ಶ್ರೀಕೃಷ್ಣಜನ್ಮಾಷ್ಟಮಿ ನಿಮಿತ್ತ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಹಾಲುಗಂಬ ಉತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಉತ್ಸವವನ್ನು ನೋಡಲು ಸಾವಿರಾರು ಜನರು ಕಾದು ನಿಂತಿದ್ದರು. ಅರ್ಚಕ ಮನೆತನದವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಪಟ್ಟಣ ಸೇರಿದಂತೆ ಬಂಕಾಪುರ, ಗುಡದೂರ, ಕರಡಿಗುಡ್ಡ, ಚಿಕ್ಕಮಾದಿನಾಳ, ಉಮಳಿ ಕಾಟಾಪುರ, ಹಿರೇ ಮಾದಿನಾಳ ಗ್ರಾಮದ ಯಾದವರು ಆಚರಿಸುವ ಹಾಲುಗಂಬ ಉತ್ಸವ ಜನಮನ ಸೂರೆಗೊಂಡಿತು.
ಗೊಲ್ಲ ಸಮುದಾಯವರು ಹಲವಾರು ದಿನಗಳಿಂದ ಸಂಗ್ರಹಿಸಿದ್ದ ಹಾಲು, ಮೊಸರು, ತುಪ್ಪವನ್ನು ಮಡಿಕೆಯಲ್ಲಿ ತುಂಬಿಕೊಂಡು ಎದುರು ಹನುಮಪ್ಪ ದೇಗುಲದ ಆವರಣದಲ್ಲಿ ಜಮಾವಣೆಗೊಂಡಿದ್ದರು. ಇದಕ್ಕೂ ಮುಂಚೆ ಅಶ್ವರೋಹಣ ಉಚ್ಛಾಯ ನೆರವೇರಿತು.
ಕಂಬಕ್ಕೆ ಜಿಡ್ಡುಗಟ್ಟಿದ ಪದಾರ್ಥ ಹಾಗೂ ಹೈನು ಪದಾರ್ಥಗಳನ್ನು ಲೇಪಿಸಿದ್ದು ಕಂಬದ ಮೇಲೆ ಕುಳಿತ ವ್ಯಕ್ತಿಯೊಬ್ಬ ಹಾಲು, ಮೊಸರು ಮಿಶ್ರಿತ ಹೈನು ಪದಾರ್ಥವನ್ನು ಕಂಬದ ಮೂಲಕ ಸುರಿದಾಗ ಕಂಬ ಏರಲು ಗೊಲ್ಲರು ಹರಸಾಹಸ ಮಾಡಿ ಹಲವು ಯತ್ನದಲ್ಲಿ ಯಶಸ್ಸು ಕಂಡರು.