ಗಂಗಾವತಿ: ಮೂರ್ನಾಲ್ಕು ದಿನಗಳಿಂದ ಇಲ್ಲಿನ ಜಯನಗರದ ಬೆಟ್ಟದಲ್ಲಿ ಸಂಚರಿಸಿ ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಸೋಮವಾರ ಸೆರೆಯಾಯಿತು.
ಚಿರತೆ ಓಡಾಡುತ್ತಿರುವ ಬಗ್ಗೆ ಜನರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ, ಭಾನುವಾರ ರಾತ್ರಿ ಗಸ್ತು ತಿರುಗಿದ್ದರು. ಆದರೆ, ಚಿರತೆ ಕಾಣದ ಹಿನ್ನೆಲೆಯಲ್ಲಿ ಮೂರು ಕಡೆ ಬೋನು ಇಟ್ಟಿದ್ದರು.
ಜಯನಗರದ ಸಿದ್ಧಿಕೇರಿ ರಸ್ತೆಯ ಸೆಂಟ್ ಫಾಲ್ಸ್ ಸಮೀಪ ಇಟ್ಟಿದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಚಿರತೆ ಗಂಡಾಗಿದ್ದು, ಆರರಿಂದ ಏಳು ವರ್ಷದ ಇರಬಹುದು. ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿ ಗೋವಿಂದರಾಜ ತಿಳಿಸಿದರು.
ವಡ್ಡರಹಟ್ಟಿಯಲ್ಲಿ ಇರುವ ಅರಣ್ಯ ಇಲಾಖೆಯ ನರ್ಸರಿ ಆವರಣಕ್ಕೆ ಚಿರತೆಯನ್ನು ಸಾಗಿಸಲಾಗಿದೆ. ಈ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದು ಗೋವಿಂದರಾಜ ಹೇಳಿದರು.