ಕೊಪ್ಪಳ: ‘ತಾಯಂದಿರಿಗೆ ಹಾಗೂ ಮಕ್ಕಳಿಗೆ ರುಚಿಕರವಾದ ಮತ್ತು ಪೌಷ್ಟಿಕ ಆಹಾರ ನೀಡಬೇಕು. ಇದರಿಂದ ತಾಯಂದಿರು ಹಾಗೂ ಮಕ್ಕಳು ಸದೃಢ ಆರೋಗ್ಯ ಪಡೆಯಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಪೌಷ್ಟಿಕ ಆಹಾರ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳ ಮೂಲಕ ರಾಗಿ ಮಾಲ್ಟ್, ಮೋರಿಂಗಾ, ಹೆಸರು ಮತ್ತು ಕಡಲೆಯಿಂದ ತಯಾರಿಸಲಾದ ಪೌಷ್ಟಿಕ ಆಹಾರವನ್ನು ತಾಯಂದಿರು ಮತ್ತು ಮಕ್ಕಳಿಗೆ ನೀಡಲಾಗುತ್ತಿದೆ. ಪೌಷ್ಟಿಕ ಆಹಾರ ನೀಡುವ ಭರದಲ್ಲಿ ಕೆಲವು ತಿನಿಸುಗಳನ್ನು ತಯಾರಿಸಲಾಗುತ್ತಿದೆ ಎಂದರು.
ಆ ಆಹಾರ ರುಚಿಕರವಾಗಿ ಇರುವುದಿಲ್ಲ. ಹಾಗಾಗಿ ಈ ಪೌಷ್ಟಿಕ ಆಹಾರವನ್ನು ತಾಯಂದಿರು ಮತ್ತು ಮಕ್ಕಳು ತಿನ್ನುವುದಿಲ್ಲ. ಪೌಷ್ಟಿಕ ಆಹಾರದ ಕೊರತೆಯಿಂದ ತಾಯಂದಿರು, ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂಥ ತೊಂದರೆಗಳಿಗೆ ಆಸ್ಪದೆ ಕೊಡದೆ ರುಚಿಕರವಾದ ಆಹಾರ ನೀಡಬೇಕು ಎಂದು ಸೂಚನೆ ನೀಡಿ
ದರು. ಪೌಷ್ಟಿಕಾಂ
ಶಗಳ ಬದಲಾವಣೆ, ಆಹಾರ ಧಾನ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ, ಇದನ್ನು ತಯಾರಿಸುವ ಬಗೆ, ಹೊಸ ಪೌಷ್ಟಿಕ ಆಹಾರಕ್ಕೆ ತಾಯಂದಿರ ಅಭಿಪ್ರಾಯ ಈ ವಿಷಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಸಿಡಿಪಿಒಗಳು, ಎಂಎಸ್ಪಿಟಿಸಿಯ ಪ್ರತಿನಿಧಿಗಳು ಹಾಗೂ ತಾಯಂದಿರು ಸೇರಿ ಸಭೆ ನಡೆಸಬೇಕು ಎಂದು ಹೇಳಿದರು. ಬಳಿಕ ಇದರಲ್ಲಿ ಯಾವ ಆಹಾರ ನೀಡಿದರೆ ಒಳ್ಳೆಯದು ಎನ್ನುವುದರ ಕುರಿತು ತೀ
ರ್ಮಾನಿಸಿ ವರದಿ ಸಲ್ಲಿಸಬೇಕು.
ಅದಕ್ಕೆ ತಕ್ಕಂತೆ ಅಗತ್ಯ ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ನೂತನ ಪೌಷ್ಟಿಕ ಆಹಾರ ತಯಾರಿಸಲು ಅನುಕೂಲವಾಗುತ್ತದೆ. ಅಲ್ಲದೇ ಗರ್ಭಿಣಿ ಮತ್ತು ಬಾಣಂತಿಯರಿಗೂ ಕೂಡಾ ಇದೇ ಆಹಾರವನ್ನು ನೀಡಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ಮಾತನಾಡಿ,‘ಹೊಸ ಪೌಷ್ಟಿಕ ಆಹಾರ ತಯಾರಿಸಲು ತಗಲುವ ವೆಚ್ಚ, ಹೊಸ ಆಹಾರ ತಯಾರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಬರುತ್ತದೆಯೇ ಎಂಬುವುದನ್ನು ಗಮನಿಸಬೇಕು. ಪೌಷ್ಟಿಕಆಹಾರವನ್ನು ತಾಯಂದಿರು ಹಾಗೂ ಮಕ್ಕಳಿಗೆ ನೀಡಬೇಕಾಗಿರುವುದರಿಂದ ಆಹಾರ ತಯಾರಿಕೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು. ಹಾಗೂ ಆಹಾರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಸಿಡಿಪಿಒ, ಎಂಎಸ್ಪಿಟಿಸಿಯ ಪ್ರತಿನಿಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.