ಕೊಪ್ಪಳ: ಇಲ್ಲಿನ ಗೌರಿ ಅಂಗಳ ಕೋಟೆ ಪ್ರದೇಶದಲ್ಲಿರುವ ಗ್ರಾಮದೇವಿ (ದ್ಯಾಮಮ್ಮ) ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಅ. 3ರಿಂದ 5ರ ತನಕ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸೋಮವಾರ ಬೆಳಿಗ್ಗೆ 8.30ಕ್ಕೆ ನವೀಕರಿಸಿದ ದೇವಿಯ ಮೂರ್ತಿಯನ್ನು ಗಂಗಾಸ್ಥಳಕ್ಕೆ ಕರೆದುಕೊಂಡು ಹೋಗುವುದು, ಕುಂಭ, ಕಳಸಗಳ ಮೂಲಕ ಕಿನ್ನಾಳ ರಸ್ತೆಯ ಶಿವ ದೇವಸ್ಥಾನದಿಂದ ಜವಾಹರ ಮುಖ್ಯರಸ್ತೆ ಮೂಲಕ ದೇವಿಯ ಮೂರ್ತಿ ದೇವಸ್ಥಾನಕ್ಕೆ ತರುವುದು ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಜರುಗಲಿದೆ.
ಮಂಗಳವಾರ ಆಯುಧ ಪೂಜೆ, ಗಣಪತಿ ಪೂಜೆ, ದೇವಾಲಯ ಶುದ್ದೀಕರಣ, ಹೋಮ ಹವನ, ಬುಧವಾರ ವಿಜಯದಶಮಿ ಅಂಗವಾಗಿ ಗ್ರಾಮದೇವಿ ತಾಯಿಯ ಮೂರ್ತಿಯನ್ನು ಮೂಲಗರ್ಭಗುಡಿ ಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾಪಿಸುವುದು, ಮಹಾಮಂಗಳಾರತಿ, ತೀರ್ಥ ಪ್ರಸಾದ ಇರಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.