ಗಂಗಾವತಿ: ಕೊರೊನಾ ಹಿನ್ನೆಲೆಯಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅನುದಾನ ರಹಿತ ಶಾಲಾ–ಕಾಲೇಜು ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮನೋಜಸ್ವಾಮಿ ಹಿರೇಮಠ ಮಾತನಾಡಿ,‘ಶಾಲೆಗಳು ಬಂದ್ ಆಗಿ ಸುಮಾರು ಎಂಟು ತಿಂಗಳಾಯಿತು. ಖಾಸಗಿ ಶಾಲಾ ಶಿಕ್ಷಕರಿಗೆ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ವೇತನವಿಲ್ಲದ ಕಾರಣ ಕುಟಂಬ ನಿರ್ವಹಣೆಗೆ ಅವರು ಕಷ್ಟಪಡುತ್ತಿದ್ದಾರೆ’ ಎಂದು ಹೇಳಿದರು.
ಅನೇಕ ಕಡೆ ಶಿಕ್ಷಕರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಲು ಕೂಲಿ ಮಾಡುವಂತಾಗಿದೆ. ಹಾಗಾಗಿ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಶಿಕ್ಷಕರಾದ ನೀಲಕಂಠ, ಭೋಗೇಶ ದೇಶಪಾಂಡೆ, ಬಸವರಾಜ ಕೆ, ವಿರುಪಾಕ್ಷಿಗೌಡ, ಕರುಣಾಕರ ಹೂಗಾರ, ಹುಲಗಪ್ಪ, ಬಸವರಾಜ ಕುಂಬಾರ, ಸಿದ್ದಯ್ಯ, ಕೃಷ್ಣಾ ಜೋಷಿ, ಅನಿಲಕುಮಾರ್, ಪ್ರದೀಪ, ಕೆಂಚಪ್ಪ, ಪ್ರವೀಣಕುಮಾರ್, ಸೋಮಶೇಖರ ಹಾಗೂ ಕನಕಾಚಲ ಪೂಜಾರ ಸೇರಿದಂತೆ ಶಿಕ್ಷಕಿಯರು ಇದ್ದರು.