ಸಿರಿಗೆರೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡನೆ ಬಾರಿ ಚಿತ್ರದುರ್ಗ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ, ಔದ್ಯೋಗಿಕವಾಗಿ ಚರ್ಚಿಸಿ, ಪಕ್ಷದ ಸಂಘಟನೆ ಗಟ್ಟಿಗೊಳಿಸಲು ಬಿರುಸಿನ ಸಿದ್ಧತೆ ನಡೆಯುತ್ತಿದೆ.
ಮಾರ್ಚ್ 27ರಂದು ದಾವಣಗೆರೆಯಿಂದ ಹೊರಟು 12.30ಕ್ಕೆ ಹೆಲಿಕಾಪ್ಟರ್ನಿಂದ ಸಿರಿಗೆರೆಗೆ ಬಂದಿಳಿಯಲಿದ್ದಾರೆ. ಇದಕ್ಕಾಗಿಯೇ ಸಿರಿಗೆರೆಯ ಬಿ.ಎಲ್.ಆರ್ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಆವರಣದಲ್ಲಿ ಹೆಲಿಪ್ಯಾಡ್ ಸಿದ್ಧಗೊಳ್ಳುತ್ತಿದೆ.
ಹೆಲಿಪ್ಯಾಡ್ನಿಂದ ಭದ್ರತಾ ಸಿಬ್ಬಂದಿ ಜೊತೆಯಲ್ಲಿ ಸುಸಜ್ಜಿತ ವಾಹನದಲ್ಲಿ ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸಾಗಿ, ನಂತರ ಶಾಂತಿವನಕ್ಕೆ ತೆರಳುವರು.
ಶಾಂತಿವನದಲ್ಲಿ ಅಮಿತ್ ಶಾ ಅವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಲಿದ್ದಾರೆ. ಜೊತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಿ.ಎಂ.ಸಿದ್ದೇಶ್ವರ, ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಯಣಸ್ವಾಮಿ, ರವಿಕುಮಾರ್, ಶಾಸಕರು, ಸಂಸದರು ಭಾಗವಹಿಸುವರು.
ಸಮಾಲೋಚನೆ ನಂತರ ಶಾಂತಿವನದಲ್ಲಿ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಮುಂತಾದ ಗಣ್ಯರು ಭೋಜನ ಸವಿಯಲಿದ್ದಾರೆ ಎಂದು ಬಿಜೆಪಿ ಕಾರ್ಯದರ್ಶಿ ಮೋಹನ್ ಹಾಗೂ ಮುಖಂಡರು ತಿಳಿಸಿದ್ದಾರೆ.
ಅಮಿತ್ ಶಾ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮ್ ಅರಸಿದ್ಧಿ, ಡಿವೈಎಸ್ಪಿ ತಿಪ್ಪೇಸ್ವಾಮಿ , ಪಿಎಸ್ಐ ಸತೀಶ್ ಹೆಲಿಪ್ಯಾಡ್ ವೀಕ್ಷಣೆ ಮಾಡಿ, ಸೋಮವಾರ ಭದ್ರತಾ ಸಿಬ್ಬಂದಿ ಜೊತೆ ಪಥಸಂಚಲನ ನಡೆಸಿದರು.