ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಗಳ ಮುಂದೆ ಮುದುಡಿದ ಕೌದಿಗಳು

ಹನುಮಸಾಗರ: ಕೌದಿ ಹೊಲಿಯುವುದೇ ಮಹಿಳೆಯರ ಬದುಕಿನ ಮೂಲ ಉದ್ಯೋಗ
Last Updated 28 ಜೂನ್ 2022, 11:41 IST
ಅಕ್ಷರ ಗಾತ್ರ

ಹನುಮಸಾಗರ: ಹನುಮಸಾಗರವು ಹಲವು ವರ್ಷಗಳಿಂದ ಹಳೆ ಬಟ್ಟೆಗಳಿಂದ ಕೌದಿ ತಯಾರಿಸುವಲ್ಲಿ ಹೆಸರಾಗಿದೆ. ಇಲ್ಲಿನ ಅನೇಕ ಮಹಿಳೆಯರು ಕೌದಿ ಹೊಲಿಯುವ ಕೆಲಸವನ್ನು ತಮ್ಮ ಬದುಕಿನ ಮೂಲ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ.

ಆದರೆ, ಈಚೆಗೆ ಕೌದಿ ಹೊಲಿಯಲು ರಾಟಿಗಳು ಬಂದ ಕಾರಣವಾಗಿ ಇವರ ಬದುಕಿಗೆ ಆಸರೆಯಾಗಿದ್ದ ಈ ಕೌದಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗಿರುವುದು ಚಿಂತೆಗೆ ಕಾರಣವಾಗಿದೆ.

ಕೌದಿ ತಯಾರಾಗುವಲ್ಲಿ ತರಾವರಿ ಬಗೆಯ ಕೆಲಸಗಳಿವೆ. ಹಾಗೆ ಆಯಾ ಕೆಲಸಕ್ಕೆ ಆಯಾ ವಯೋಮಾನದವರೆ ಕೆಲಸ ನಿರ್ವಹಿಸಲು ಸೂಕ್ತವೆಂಬಂತೆ ಕಾಣುತ್ತದೆ.

ಹಳ್ಳಿಗರಿಂದ ಕೌದಿಗೆ ಬೇಡಿಕೆ ಪಡೆದು, ಅವರು ನೀಡುವ ಹಳೆಯ ಅರಿವೆಗಳನ್ನು ತರುತ್ತಾರೆ. ಬಳಿಕ ಆ ಎಲ್ಲ ಬಟ್ಟೆಗಳನ್ನು ತೊಳೆದು ಒಣಗು ಹಾಕುತ್ತಾರೆ. ಅರಿವೆಯಲ್ಲಿನ ಗಟ್ಟಿ ಭಾಗ ಹುಡುಕಿ ಕತ್ತರಿಸಿಕೊಳ್ಳುತ್ತಾರೆ. ನಂತರ ವೃದ್ದರು, ಯುವತಿಯರು ಸಾಮೂಹಿಕವಾಗಿ ಹೊಲೆಯಲು ಕೂಡುತ್ತಾರೆ.

'ಸಂಪೂರ್ಣವಾಗಿ ನಮ್ಮ ದೈಹಿಕ ಶ್ರಮವೇ ಈ ಕೆಲಸಕ್ಕೆ ದೊಡ್ಡ ಬಂಡವಾಳ ನೋಡ್ರಿ' ಎಂದು ಹನುಮಸಾಗರದ ಗಂಗಮ್ಮ ಹೇಳುತ್ತಾರೆ.

‘ಬಂಡವಾಳ ಇಲ್ಲ ಅನ್ನೋದೇನ ಖರೆ ಐತ್ರಿ, ಆದ್ರ ಸೂಜಿ ಪೋಣಿಸಿ ಒಂದೇ ಕಡೆ ದೃಷ್ಟಿ ನೆಟ್ಟೂ ನೆಟ್ಟೂ ಕಣ್ಣು ಮಂಜಾಗ್ಯಾವ್ರಿ, ಕುಂತು ಕುಂತು ನಡು ಬಾಗತಾವ್ರಿ' ಎಂದು ಕೌದಿಯ ಹಿಂದೆ ಅಡಗಿರುವ ಹಲವಾರು ತೊಂದರೆಗಳನ್ನು ಯುವತಿ ಶಾಂತಾ ಹೀಗೆ ಬಿಚ್ಚಿಡುತ್ತಾರೆ.

ಇಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಕುಟುಂಬಗಳು ಈ ಕೌದಿ ಕಾಯಕವನ್ನೇ ಅವಲಂಬಿಸಿದ್ದಾರೆ.
ಪುಟ್ಟ ಕೌದಿಗಳಾದರೆ ಒಬ್ಬರೆ ಹೊಲಿಯಲು ಕುಳಿತರೆ ದೊಡ್ಡ ಕೌದಿಗೆ ಏಕಕಾಲದಲ್ಲಿ ನಾಲ್ಕಾರು ಜನರು ಕೌದಿಯ ಒಂದೊಂದು ಮೂಲೆಗಳನ್ನು ಹಿಡಿದು ಹೊಲಿಯಲು ಕೂಡುತ್ತಾರೆ.

ಬಳಸಿ ಬೀಸಾಕಿದ ಅಥವಾ ತುಂಡಾದ ಮಕ್ಕಳ ಬಟೆಗಳು, ತಾತನ ಧೋತಿ, ಅಜ್ಜಿಯ ಹಳೆ ಸೀರೆಗಳೇ ಇವರ ಕೌದಿಗೆ ಬೇಕಾಗುವ ಮೂಲ ಕಚ್ಚಾ ವಸ್ತುಗಳು. ಕೌದಿಗಳಿಗೆ ಒಂದು ಮೊಳಕ್ಕೆ ₹ 80 ರಿಂದ ₹ 100 ಮಜೂರಿ ಇದೆ. ಸಾಮಾನ್ಯವಾಗಿ ಕೌದಿಗಳು ಎಂಟರಿಂದ ಹತ್ತು ಮೊಳಗಳು ಇರುತ್ತವೆ. ಒಂದು ಕೌದಿ ಸಂಪೂರ್ಣವಾಗಿ ಸಿದ್ಧವಾಗಬೇಕಾದರೆ ನಾಲ್ಕು ಜನರು ಎರಡು ದಿವಸ ಹೊಲಿಗೆ ಹಾಕಬೇಕಾಗುತ್ತದೆ.

ಕೆಲ ದರ್ಜಿಗಳು ಜೀನ್ಸ್ ಬಟ್ಟೆ ಹೊಲಿಯಲು ಬಳಸಿ ಹಳೆಯದಾಗಿರುವ ರಾಟಿಗಳನ್ನು ಖರೀದಿಸಿ ಹಳ್ಳಿಗಳ ಕಡೆಗೆ ಬಂದು ಕಡಿಮೆ ಕೂಲಿಯಲ್ಲಿ ಕೌದಿ ಹೊಲಿದು ಕೊಡುತ್ತಿದ್ದಾರೆ. ರಾಟಿಯಿಂದ ದಿನಕ್ಕೆ ನಾಲ್ಕಾರು ಕೌದಿಗಳನ್ನು ಹೊಲಿಯುತ್ತಾರಾದರೂ ಕೈಯಿಂದ ಹಾಕಿದ ಹೊಲಿಗೆಗೂ ರಾಟಿಯಿಂದ ಹಾಕಿದ ಹೊಲಿಗೆಗೂ ಸಾಕಷ್ಟು ಅಂತರವಿರುತ್ತದೆ.

‘ರಾಟಿ ಬಂದ ನಂತರ ನಮ್ಮ ದುಡಿಮೆಗೆ ದೊಡ್ಡ ಪೆಟ್ಟು ಬಿದ್ದೈತ್ರಿ, ಸರ್ಕಾರ ನಮಗೂ ಅಂತಹ ರಾಟಿಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡಿದರೆ ನಮಗೂ ಬದಕೋಕೆ ಅನುಕೂಲ ಮಾಡಿದಂಗಾಕೈತೆ’ ಎಂದು ರಾಮವ್ವ ನೊಂದು ಹೇಳುತ್ತಾರೆ.
**

ಕೌದಿ ಹೆಣಿಗೆ ಹಾಕುವವರು ಬಡಕುಟುಂಬದವರಾಗಿದ್ದು, ಗ್ರಾಮೀಣ ಭಾಗದಲ್ಲಿ ಜನಪದ ಹೊದಿಕೆ ಹೊದ್ದ ಕೌದಿ ಉಳಿಯಬೇಕಾದರೆ ಸರ್ಕಾರ ಕೌದಿ ಕಲವಿದರ ನೆರವಿಗೆ ಬರಬೇಕು.
-ರಮೇಶ ಬಡಿಗೇರ, ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT