ಹನುಮಸಾಗರ: ತಾಲ್ಲೂಕಿನ ವಿವಿಧ ಭಾಗದಲ್ಲಿ ಬೆಳೆದಿರುವ ಮಾವು ಮಾರಾಟ ಮಾಡಲು ರೈತರು ಹರಸಾಹಸ ಪಡುತ್ತಿದ್ದು, ಸ್ಥಳೀಯವಾಗಿ ಮಾರಾಟ ಮಾಡುವ ಮೂಲಕ ತಕ್ಕಮಟ್ಟಿಗೆ ಹಾನಿಯನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ತೋಟಗಾರಿಕೆ ಇಲಾಖೆ ರಾಜ್ಯದ ವಿವಿಧ ಮಾರಾಟಗಾರರೊಂದಿಗೆ ರೈತರನ್ನು ಸಂಪರ್ಕ ಮಾಡಲಾಗಿದ್ದರೂ ವಿವಿಧ ತೊಂದರೆಯ ಕಾರಣದಿಂದಾಗಿ ಮಾವು ಬೆಳೆಗಾರರು ದೂರದ ರೈತರಿಗೆ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಬಾರಿ ವಾತಾವರಣದ ಏರುಪೇರಿನಿಂದಾಗಿ ಎರಡು ವಾರ ತಡವಾಗಿ ಕೊಯ್ಲಿಗೆ ಬಂದಿದೆ. ಲಾಕ್ಡೌನ್ ಸಮಯದಲ್ಲಿಯೇ ಮಾವು ಮಾರಾಟಕ್ಕೆ ಮಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.
‘ಈ ಬಾರಿ ಫಸಲು ಕಡಿಮೆ ಇದೆ. ಅದಾಗ್ಯೂ ಸುಮಾರು 1,200 ಟನ್ ಮಾವು ಇಳುವರಿ ಬಂದಿದೆ. ರೈತರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಹಾಪ್ಕಾಮ್ಸ್ ಮೂಲಕ ಮಾರಾಟ ಮಾಡಲಾಗಿದೆ. ಕೆಲ ರೈತರಿಗೆ ಮಾರಾಟಕ್ಕೆ ಪಾಸ್ ವಿತರಿಸಲಾಗಿದೆ. ಸದ್ಯ ಕಟ್ಟುನಿಟ್ಟಿನ ಲಾಕ್ಡೌನ್ ಇರುವ ಕಾರಣ ಮನೆ ಮನೆಗೆ ಹೊತ್ತು ಮಾರಾಟ ಮಾಡಲು ಸಲಹೆ ನೀಡಿ ಆಗುವ ಹಾನಿಯನ್ನು ತಕ್ಕಮಟ್ಟಿಗೆ ತಪ್ಪಿಸಲಾಗಿದೆ' ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ ವಂಕಿ ಹೇಳಿದರು.
ಈಗಾಗಲೇ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾವು ಬೆಳೆದ ರೈತರು ನೈಸರ್ಗಿಕವಾಗಿ ಹಣ್ಣಾಗಿಸಿ ನೇರವಾಗಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ತೋಟಗಾರಿಕಾ ಸಹಾಯಕ ನಿರ್ದೇಶಕ ಕಳಕನಗೌಡ ಪಾಟೀಲ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಕೇಸರ, ಬೇನಿಸಾನ್, ರತ್ನಗಿರಿ ಆಫೋಸ್, ನೀಲಂ, ತೋತಾಪುರಿ ತಳಿಗಳನ್ನು ಬೆಳೆಯಲಾಗುತ್ತಿದೆ. ಡಿಸೆಂಬರ್ನಲ್ಲಿ ಹೂವು ಬಿಟ್ಟು, ಏಪ್ರಿಲ್ ತಿಂಗಳಲ್ಲಿ ಬರಬೇಕಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಒಂದು ತಿಂಗಳ ತಡವಾಗಿದೆ ಎಂದು ತಿಳಿಸಿದರು.
‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿಗೆ ಬೆಲೆ ಕಡಿಮೆ ಇದೆ. ಗುಣಮಟ್ಟದ ಮಾವು ಹಿಂದಿನ ವರ್ಷ ಕೆ.ಜಿಗೆ ₹80 ರಿಂದ ₹100 ಮಾರಾಟವಾಗಿದ್ದರೆ, ಈ ಬಾರಿ ₹40 ರಿಂದ ₹50ಕ್ಕೆ ಇಳಿದಿದೆ’ ಎಂದು ಮಾವು ಬೆಳೆಗಾರರಾದ ದ್ಯಾಮಣ್ಣ ಹೂನೂರ, ಶರಣಪ್ಪ ಹನುಮನಾಳ ಹೇಳಿದರು.
ಈ ಮಧ್ಯದಲ್ಲಿ ಎರಡು ಬಾರಿ ಸುರಿದ ಮಳೆ, ಬಿರುಗಾಳಿಗೆ ಅಲ್ಪಸ್ವಲ್ಪ ಬೆಳೆದು ನಿಂತಿದ್ದ ಮಾವು ಉದುರಿದ್ದು, ರೈತರಿದೆ ನಷ್ಟವಾಗಿದೆ.
ಕೆಲ ರೈತರು ಗಾಳಿಗೆ ಕಾಯಿ ಉದುರುತ್ತವೆ ಎಂದು ಕೊಯ್ಲು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲ ರೈತರು ಲಾಕ್ಡೌನ್ ಮುಗಿದ ನಂತರ ಕೊಯ್ಲು ಮಾಡಬೇಕು ಎಂದು ಮರದಲ್ಲಿಯೇ ಕಾಯಿಗಳನ್ನು ಉಳಿಸಿಕೊಂಡಿರುವುದು ಕಂಡು ಬರುತ್ತಿದೆ.
ಮಾವು ಬೆಳೆಗಾರರಿಗೆ ಸಂಕಷ್ಟ
ಹನುಮಸಾಗರ: ಇಲ್ಲಿನ ಮಾವು ಬೆಳೆಗಾರ ರುದ್ರಗೌಡ ಗೌಡಪ್ಪನವರು ತಮ್ಮ ಆರು ಎಕರೆ ಜಮೀನಿನಲ್ಲಿ ಬೆಳೆದಿರುವ ವಿವಿಧ ತಳಿಗಳ ಮಾವು ಪೂರ್ಣ ಪ್ರಮಾಣದಲ್ಲಿ ಮಾಗಿ ಕೊಯ್ಲಿಗೆ ಬಂದಿದ್ದರೂ, ಲಾಕ್ಡೌನ್ ಕಾರಣ ಒಂದೆರಡು ವಾರ ಕಾದು ನಿರ್ಧರಿಸಿದ್ದಾರೆ.
ಆರು ಎಕರೆ ಮಿಶ್ರ ಬೇಸಾಯದಲ್ಲಿ ಬೇನಿಸ್, ಕೇಸರ, ನೀಲಂ, ಆಫೋಸ್ ತಳಿಗಳ ಮಾವು ಬೆಳೆದಿದ್ದು, ಸದ್ಯ ಉತ್ತಮ ಇಳುವರಿ ಬಂದಿದೆ. ಲಾಕ್ಡೌನ್ ಇರುವುದರಿಂದ ಮಾವು ಮಾರಾಟ ಮಾಡಲು ಆಗುತ್ತಿಲ್ಲ.
‘ರೈತರು ಗಾಳಿ, ಮಳೆಯಿಂದ ರಕ್ಷಿಸಿ ಹೇಗೋ ಫಸಲು ದಕ್ಕಿಸಿಕೊಂಡಿದ್ದಾರೆ. ಆದರೆ ಕೊರೊನಾ ಹಾವಳಿಗೆ ತತ್ತರಿಸಿ ಹೋಗುತ್ತಿದ್ದಾರೆ. ಕಡಿಮೆ ಬೆಲೆಗೆ ಖರೀದಿಸುವ ದಲ್ಲಾಳಿಗಳು, ದುಪ್ಪಟ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ರೈತರು ಸಾಲಗಾರರಾಗುತ್ತಿದ್ದರೆ, ಮಧ್ಯವರ್ತಿಗಳು, ವ್ಯಾಪಾರಸ್ಥರು ಕಾಸು ಮಾಡಿಕೊಳ್ಳುತ್ತಿದ್ದಾರೆ’ ಎಂದು ರುದ್ರಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.