ಕುಕನೂರು: ಜನನ ವೇಳೆ ಮಕ್ಕಳ ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹತ್ವದ ಯೋಜನೆ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಸರ್ಕಾರಿ ಯೋಜನೆಯ ಸದುಪಯೋಗಕ್ಕೆ ಮುಂದಾಗಿ ಮಕ್ಕಳ ಮರಣ ಪ್ರಮಾಣ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಸಿ.ಎಸ್ ಹಿರೇಮಠ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಯಿ ಹಾಗೂ ಮಕ್ಕಳ ಮರಣ ಪ್ರಮಾಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೀಗಾಗಿ ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಬೇಕು. ಆಸ್ಪತ್ರೆ ಹೆರಿಗೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಪ್ರಸೂತಿ ಆರೈಕೆ, ಹೆರಿಗೆ ಭತ್ಯೆ, ಮಡಿಲು ಕಿಟ್ಟು ಮುಂತಾದ ಸೌಲಭ್ಯಗಳು ದೊರೆಯುತ್ತವೆ. ಈ ಕಾರಣಕ್ಕಾಗಿ ಮಹಿಳೆಯರು ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಿದರು.
ಗರ್ಭಿಣಿಯರು ರಕ್ತಹೀನತೆಯಿಂದ ಹೊರ ಬರಬೇಕಾದರೆ ಪೌಷ್ಟಿಕ ಆಹಾರ ಸೇವನೆಗೆ ಅದ್ಯತೆ ನೀಡಬೇಕು. ತಾಯಿ ಹಾಗೂ ಮಗುವಿನ ಆರೈಕೆಯಲ್ಲಿ ಕುಟುಂಬದ ಪಾತ್ರ ಮಹತ್ವದ್ದು. ಹೆರಿಗೆ ಸಮಯದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದಕ್ಕಾಗಿಯೇ ಸರ್ಕಾರ ಆಸ್ಪತ್ರೆ ಹೆರಿಗೆಯನ್ನು ಕಡ್ಡಾಯಗೊಳಿಸಿದೆ. ಜತೆಗೆ ಗರ್ಭಿಣಿಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯಯುತ ಹೆರಿಗೆಗೆ ಮುಂದಾಗಬೇಕು ಎಂದರು.
ಗಂಗಮ್ಮ, ಗೀತಾ ಅರಳಿಕಟ್ಟಿ, ಪ್ರವೀಣ ಇದ್ದರು.