ಕುಷ್ಟಗಿ: ‘ಉದ್ಯೋಗ ಯಾವುದೇ ಆಗಿದ್ದರೂ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು. ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುತ್ತದೆ’ ಎಂದು ಪಟ್ಟಣದ ಪ್ರಹ್ಲಾದಾಚಾರ ಸೌದಿ ಹೇಳಿದರು.
ನಿತ್ಯನಿಧಿ ಠೇವಣಿ ಸಂಗ್ರಹ ವೃತ್ತಿಯಿಂದ ನಿವೃತ್ತಿ ಹೊಂದಿದ ಕಾರಣ ಇಲ್ಲಿಯ ಬುತ್ತಿಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಪಟ್ಟಣದ ನಿತ್ಯನಿಧಿ ಠೇವಣಿ ಸಂಗ್ರಹಕಾರರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಪ್ರತಿಯೊಬ್ಬರೂ ವೃತ್ತಿಪರ ಗೌರವ ಹೊಂದಿರಬೇಕು. ಜನರಿಗೆ ನಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುವುದೂ ಸಮಾಜದ ಋಣ ಸಂದಾಯದ ಒಂದು ಭಾಗವಾಗುತ್ತದೆ. ನಾಲ್ಕೂವರೆ ದಶಕದ ತಮ್ಮ ವೃತ್ತಿ ಬದುಕಿನಲ್ಲಿ ಗಳಿಸಿದ ವಿಶ್ವಾಸಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ’ ಎಂದು ಅನುಭವ ಹಂಚಿಕೊಂಡರು.
ಪಿಗ್ಮಿ ಸಂಗ್ರಹಕಾರರಾದ ಜಯತೀರ್ಥ ಸೌದಿ, ಅನಿಲಕುಮಾರ್ ಆಲಮೇಲ, ಪ್ರಶಾಂತ ಅಂಗಡಿ, ಶಂಕರಪ್ಪ ಬನ್ನಿಗೋಳ, ಜಮದಗ್ನಿ, ನಾಗರಾಜಗೌಡ, ಶ್ರೀಶೈಲ, ಶಿವಕುಮಾರ ಹಿರೇಮಠ ಹಾಗೂ ಹನುಮೇಶ ಕುಲಕರ್ಣಿ ಇದ್ದರು.