ಗಂಗಾವತಿ: ‘ರೈತರು ಕೃಷಿಯ ಜತೆಗೆ ಜೇನು ಸಾಕಾಣಿಕೆಯಲ್ಲಿ ತೊಡಗಿಕೊಂಡು ಆದಾಯ ಗಳಿಸಬಹುದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫೀ ಹೇಳಿದರು.
ತಾಲ್ಲೂಕು ಪಂಚಾಯಿತಿಯು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರೈತರಿಗೆ ಮಂಗಳವಾರ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಬೇಸಾಯ ನೆಚ್ಚಿಕೊಂಡು ಬದುಕುತ್ತಿರುವ ರೈತರು ಕೇವಲ ಕೃಷಿಯ ಮೇಲೆ ಅವಲಂಬನೆಯಾಗಬಾರದು. ಜತೆಗೆ ಹೈನುಗಾರಿಕೆ, ಕೋಳಿ ಹಾಗೂ ಮೇಕೆ ಸಾಕಾಣಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.
‘ಇಲಾಖೆಯವರು ಸಂಪೂರ್ಣ ಸಹಕಾರ ನೀಡುತ್ತಾರೆ. ರೈತರು ತರಬೇತಿ ಪಡೆದುಕೊಳ್ಳಬೇಕು. ಇದರಿಂದ ಆದಾಯ ದ್ವಿಗುಣವಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.
ನಂತರ ರೈತರಿಗೆ ತರಬೇತಿ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ, ಕೆವಿಕೆ ಮುಖ್ಯಸ್ಥ ಡಾ.ಎಂ.ವಿ.ರವಿ, ಸಿಡಿಪಿಒ ಗಂಗಪ್ಪ ಮತ್ತು ಪ್ರಮುಖರಾದ ಡಾ.ರಾಘವೇಂದ್ರ ಎಲಿಗಾರ ಹಾಗೂ ರೈತರು ಸಮಾರಂಭದಲ್ಲಿ ಹಾಜರಿದ್ದರು.