ಜಿ.ವೀರಾಪೂರ (ಯಲಬುರ್ಗಾ): ‘ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣನವರ ಸಲಹೆ ನೀಡಿದರು.
ತಾಲ್ಲೂಕಿನ ಜಿ.ವೀರಾಪೂರ ಗ್ರಾಮದಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ 105ನೇ ಜನ್ಮದಿನದ ಪ್ರಯುಕ್ತ ನಡೆದ ಉಪನ್ಯಾಸ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲ್ಲೂಕಿನ ಬಹುತೇಕ ಪ್ರದೇಶ ತೋಟಗಾರಿಕೆ ಬೆಳೆಗಳಿಗೆ ಉತ್ತಮ ವಾತಾವರಣ ಹೊಂದಿದೆ. ಆಸಕ್ತರು ಸೂಕ್ತ ಮಾರ್ಗದರ್ಶನ ಪಡೆದು ಕ್ರಿಯಾಶೀಲರಾದರೆ ಪ್ರಗತಿಪರ ತೋಟಗಾರಿಕಾ ಬೆಳೆಗಾರರಾಗಿ ಹೆಸರು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಮರೀಗೌಡ ಅವರು ತೋಟಗಾರಿಕೆಯಲ್ಲಿ ಮಾಡಿದ ಸಾಧನೆ, ಅವರ ಸರಳ ಜೀವನ ಹಾಗೂ ಆದರ್ಶಗಳು ಪ್ರತಿಯೊಬ್ಬ ರೈತರಿಗೆ ಮಾದರಿಯಾಗಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ ಕಲ್ಲೂರು ರೈತರಿಗೆ ಸಸಿಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಾಯಕ ಅಧಿಕಾರಿ ಶಿವಕುಮಾರ, ಸದಸ್ಯರಾದ ಸುಭಾಸ್ ಕೊಂಗಿ, ಮಹೇಶ ಹರಿಜನ, ಮುಖಂಡರಾದ ಮರಿಯಪ್ಪ ಹೊಸಮನಿ, ಶಿವಕುಮಾರ ಸಾಹುಕಾರ, ಮರಿಯಪ್ಪ ಹರಿಜನ ಹಾಗೂ ನಾಗರಾಜ ಇದ್ದರು.