ಗಂಗಾವತಿ: ‘ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ವಸತಿ ನಿಲಯ ನಿರ್ಮಿಸಿ ಕೊಡಲಾಗಿದೆ. ವಿದ್ಯಾರ್ಥಿನಿಯರು ಇದರ ಉಪಯೋಗ ಪಡೆದು ಉತ್ತಮ ಸಾಧನೆ ಮಾಡಬೇಕು’ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಇಲ್ಲಿನ ಕಲ್ಯಾಣ ನಗರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
₹2 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕಾಂಪೌಂಡ್ ನಿರ್ಮಿಸಿಕೊಡಲಾಗುವುದು. ಇಲ್ಲಿ ಅಧಿಕಾರಿಗಳು, ಅಡುಗೆದಾರರು ಮಕ್ಕಳಿಗೆ ಗುಣಮಟ್ಟದ ಉಪಾಹಾರ ಒದಗಿಸಬೇಕು. ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದರು.
ತಾಲ್ಲೂಕು ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ದಿ ಹೊಂದುತ್ತಿದ್ದು, ಇಲ್ಲಿನ ಎಂಜಿನಿಯರಿಂಗ್ ಮತ್ತು ಕೃಷಿ ಕಾಲೇಜುಗಳಿಗೂ ವಸತಿ ನಿಲಯಗಳ ಅವಶ್ಯಕತೆ ಇದೆ. ಅತೀ ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ,‘ಒಡ ಹುಟ್ಟಿದವರು ಸಹ ಕಸಿದುಕೊಳ್ಳಲಾಗದ ಆಸ್ತಿ ಎಂದರೆ ಅದು ವಿದ್ಯೆ ಮಾತ್ರ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂದರೆ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು’ ಎಂದು ಹೇಳಿದರು.
ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ವಸತಿ ನಿಲಯ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ನೀಡುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಉಪಯೋಗ ಪಡೆದು, ಶಿಕ್ಷಣ ಪೂರೈಸಿ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ನಗರ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ಸದಸ್ಯ ನವೀನ್ ಪಾಟೀಲ, ಶರಭೋಜಿ, ನೀಲಕಂಠ, ಸಂಗಪ್ಪ ರಾಯಬಾಗಿ, ಟಿ.ಆರ್. ರಾಯಬಾಗಿ, ರಾಚಪ್ಪ ಹಾಗೂ ಶೇಖರಪ್ಪ ಮಸ್ಕಿ ಸೇರಿದಂತೆ ಹಲವರು ಇದ್ದರು.