ಕಾರಟಗಿ: ‘ಹಿರಿಯರ ಮಾರ್ಗದರ್ಶನ, ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ನನ್ನ ಗುರಿ. ಸಾರ್ವಜನಿಕರು, ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಪುರಸಭೆ ನೂತನ ಅಧ್ಯಕ್ಷ ಶರಣೇಶ್ ನಾಗಪ್ಪ ಸಾಲೋಣಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಲ ತಿಂಗಳಿಂದ ಪುರಸಭೆಗೆ ಆಡಳಿತ ಮಂಡಳಿ ಇರದೇ, ಸಾರ್ವಜನಿಕರು ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಪಟ್ಟಣದ ನಾಗರಿಕರಿಗೆ ಸಮರ್ಪಕ ಸೇವೆ ದೊರೆಯುವಂತೆ ತುರ್ತು ಕ್ರಮ ವಹಿಸಲಾಗುವುದು. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು. ಹಿರಿಯರು, ಜನರು ತಮ್ಮ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.
ಸಭೆ, ಸನ್ಮಾನ: ಬಳಿಕ ಪುರಸಭೆ ಆವರಣದಲ್ಲಿ ನೂತನ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮ ನಡೆಯಿತು.
ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅರಳಿ ಮಾತನಾಡಿದರು.
ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಪ್ರಮುಖರಾದ ಶಿವರೆಡ್ಡಿ ನಾಯಕ ಹಾಗೂ ಬಿಲ್ಗಾರ ನಾಗರಾಜ್ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ, ಪುರಸಭೆ ಸದಸ್ಯ ಕೆ. ಸಂಗನಗೌಡ, ರವಿರಾಜ ನಂದಿಹಳ್ಳಿ, ಯೂಸೂಫ್, ಡಿ.ಹಿಳಿಯಪ್ಪ, ಮಾರುತಿ, ಶಂಕರ ರಾಠೋಡ, ಗಿರಿಯಪ್ಪ ಬೂದಿ, ಸುಂಕದ ಚನ್ನಬಸಪ್ಪ, ಮಹಾರುದ್ರಯ್ಯಸ್ವಾಮಿ, ಶಿವಶರಣೇಗೌಡ, ಅಮರೇಶ ಪೊಲೀಸ್ ಪಾಟೀಲ ಹಾಗೂ ಸಂಗಮಗೌಡ ಇದ್ದರು.