ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ನಿಡಶೇಸಿ ಕೆರೆ ಕಾಯಕ ಪೂರ್ಣ

ಏ 13 ರಂದು ಕೆರೆ ಅಂಗಳದಲ್ಲಿ ಸಮಾರೋಪ
Last Updated 9 ಏಪ್ರಿಲ್ 2019, 14:34 IST
ಅಕ್ಷರ ಗಾತ್ರ

ಕುಷ್ಟಗಿ: ಸಾರ್ವಜನಿಕರ ಸ್ವಯಂ ಪ್ರೇರಣೆಯಿಂದ ನಡೆದ ನಿಡಶೇಸಿ ಕೆರೆ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಕಾಮಗಾರಿ ನಿಗದಿಪಡಿಸಿದಂತೆ ಪೂರ್ಣಗೊಂಡಿದ್ದು ಅದರ ಸಮಾರೋಪ ಏ. 13 ರಂದು ನಡೆಯಲಿದೆ.

ಪಟ್ಟಣದಲ್ಲಿ ಮಂಗಳವಾರ ನಡೆದ ಕೆರೆಗಳ ಅಭಿವೃದ್ಧಿ ಸಮಿತಿ ಪೂರ್ವಸಿದ್ಧತೆ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು ಕೆರೆ ಅಂಗಳದಲ್ಲಿ ಉದ್ಯಾನ ನಿರ್ಮಾಣಕ್ಕೆ ಸಿದ್ಧಗೊಂಡಿರುವ ಸ್ಥಳದಲ್ಲಿ ಸಂಜೆ 4ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಹಾಲಕೆರೆ ಅನ್ನದಾನ ಸ್ವಾಮೀಜಿ, ಕಪ್ಪತಗುಡ್ಡ, ಅಂಕಲಿಮಠ, ಬಿಜಕಲ್ಲ, ಮದ್ದಾನೇಶ್ವರ ಮಠ, ನಿಡಶೇಸಿ, ಚಳಗೇರಿ, ಎಂ.ಗುಡದೂರು ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಈ ಕುರಿತು ಪರ್ತಕರ್ತರಿಗೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಕೆರೆಯ ಹೂಳೆತ್ತುವ ಕೆಲಸ 65 ದಿನ ಪೂರೈಸಲಿದ್ದು ಅದಕ್ಕೆ ಸಾರ್ವಜನಿಕರು, ರೈತರು, ವಿವಿಧ ಗ್ರಾಮಸ್ಥರು, ಶಾಲೆ ಕಾಲೇಜುಗಳ ಆಡಳಿತ ಮಂಡಳಿಯವರು ಸಮಾಜದ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ನೆರವು ನೀಡಿದ್ದಾರೆ. ಬಹಳಷ್ಟು ಜನ ಉದ್ದಿಮೆದಾರರು, ಪ್ರಮುಖರು ಯಂತ್ರಗಳನ್ನು ಉಚಿತವಾಗಿ ಒದಗಿಸಿದ್ದಾರೆ. ಬಹಳಷ್ಟು ಜನರು ಬಿಸಿಲು ಗಾಳಿಯಲ್ಲಿ ಕೆರೆಯ ಅಭಿವೃದ್ಧಿಗಾಗಿ ದಣಿವರಿಯದೆ ಶ್ರಮವಹಿಸಿದ್ದಾರೆ ಎಂದು ಹೇಳಿದರು.

ಹೂಳೆತ್ತುವ ಕೆಲಸದಲ್ಲಿ ಪ್ರತಿದಿನ ಶ್ರಮ ವಹಿಸಿದರುವ ಕಾರ್ಮಿಕರು, ಚಾಲಕರು, ಕಾಮಗಾರಿಗೆ ಸಹಕರಿಸಿದವರು ಮತ್ತು ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲಿದ್ದು ಸಮಿತಿಯ ವತಿಯಿಂದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಕೆರೆ ಹೂಳೆತ್ತುವ ಅಭಿಯಾನದ ನೆನಪಿಗಾಗಿ ಹೊರತಂದಿರುವ 'ಜಲ ದೀಕ್ಷೆ' ಪುಸ್ತಕ ಬಿಡುಗೊಳಿಸಲಾಗುತ್ತದೆ. ಕೆರೆ ಅಭಿವೃದ್ಧಿಗೆ ದಾನಿಗಳು ನೀಡಿದ ಹಣದಲ್ಲಿನ ಒಂದು ರೂಪಾಯಿಯನ್ನೂ ಅನ್ಯ ಕೆಲಸಗಳಿಗೆ ಬಳಕೆ ಮಾಡಿಲ್ಲ ಎಂದರು.

ಬರಗಾಲದ ಸ್ಥಿತಿ ಇರುವುದರಿಂದ ಸಮಾರೋಪ ಕಾರ್ಯಕ್ರಮ ಸರಳವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ. ಆಮಂತ್ರಣ ಪತ್ರಿಕೆಗಳೂ ಇರುವುದಿಲ್ಲ. ವೇದಿಕೆಯಲ್ಲಿ ಸ್ವಾಮೀಜಿಗಳು ಮಾತ್ರ ಉಪಸ್ಥಿತರಿರುತ್ತಾರೆ. ಪಟ್ಟಣದ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಾನಿಗಳು, ಕೆರೆ ಅಭಿವೃದ್ಧಿಗೆ ತನು ಮನ ಧನದಿಂದ ಪ್ರೋತ್ಸಾಹಿಸಿರುವ ಎಲ್ಲರೂ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ಎಸ್‌.ಎಚ್‌.ಹಿರೇಮಠ, ಅಮರೇಶ್ವರ ಶೆಟ್ಟರ, ಬಸವರಾಜ ಕುದರಿಮೋತಿ, ತಾಜುದ್ದೀನ ದಳಪತಿ, ದೊಡ್ಡಬಸವ ಬಯ್ಯಾಪುರ, ಅಪ್ಪಣ್ಣ ನವಲೆ, ಜಗನ್ನಾಥ ಗೋತಗಿ, ಶರಣಪ್ಪ ಹಂಪನಾಳ, ವೀರೇಶ ತುರಕಾಣಿ, ಅಜಯಕುಮಾರ ಹಿರೇಮಟ, ಆರ್‌.ಟಿ.ಸುಬಾನಿ, ಭರಮಗೌಡ ಬ್ಯಾಲಿಹಾಳ, ಮಲ್ಲಿಕಾರ್ಜುನ ಬಳಿಗಾರ ಇತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT