ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಜೆಡಿಎಸ್ ಪಕ್ಷದ ಮುಖಂಡ ಪಾಡಗುತ್ತಿ ಅಕ್ತರ್ ಸಾಬ್ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಈ ಹಿಂದೆ 2013-14ರ ವೇಳೆಯಲ್ಲಿ ಬಲಿಷ್ಠವಾಗಿತ್ತು. ಇಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಇದೀಗ ಪಕ್ಷ ಸಂಪೂರ್ಣ ನೆಲಕ್ಕೆ ಕುಸಿದಿದ್ದು, ಪಕ್ಷದ ಸಂಘಟನೆ ದೃಢಪಡಿಸಲು ಮುಂದಾಗಲಿದ್ದೀನೆ. ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಪ್ರಣಾಳಿಕೆಗಳನ್ನು ರಚಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಭಾಗ ಅಭಿವೃದ್ಧಿ ಕಾಣಲಿದೆ ಎಂದರು.
ಮಾಜಿ ಸಂಸದ ಎಚ್.ಜಿ ರಾಮುಲು ಅವರ ಆರೋಗ್ಯದಲ್ಲಿ ಏರುಪೇರು ಆದಾಗ ಯಾವ ಕಾಂಗ್ರೆಸ್ ನಾಯಕನು ಮನೆಕಡೆ ಬರಲಿಲ್ಲ. ಇದೀಗ ಪಕ್ಷದ ಬಲವರ್ಧನೆಗೆ ಎಂದು ಎಲ್ಲ ನಾಯಕರು ಬರುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆನಾಚಿಕೆ ಆಗಬೇಕು ಎಂದು ಅವರು ಕಿಡಿಕಾರಿದರು.
ಎಚ್.ಆರ್.ಜಿ ಕುಟುಂಬ ನಮ್ಮ ಜೆಡಿಎಸ್ ಆಸ್ತಿ. ಕಾಂಗ್ರೆಸ್ ನಾಯಕರು ಇದೀಗ ಪದೆ ಪದೆ ಮನೆಗೆ ಭೇಟಿ, ನಮ್ಮ ಜೆಡಿಎಸ್ ಪಕ್ಷದ ಮನೆ ಮರಿಯುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ನಾಯಕರನ್ನು ಕರೆಯುವ ನೈತಿಕತೆ ಕಾಂಗ್ರೆಸಿಗಿಲ್ಲ. ಪಕ್ಷಕ್ಕೆ ಕರೆಯುವವರಿಗೆ ಮತ್ತು ಪಕ್ಷದಿಂದ ಹೋಗುವವರಿಗೆ ಸ್ವಾಭಿಮಾನ ಇರಬೇಕು ಎಂದು ಅವರು ತಿಳಿಸಿದರು.
ಹಾಗೇ ಜನತಾದಳ ಪಕ್ಷದ ಆದೇಶದ ಪ್ರಕಾರ ಗಂಗಾವತಿ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಶೇಖ ನಬಿಸಾಬ್ ಅವರಿಗೆ ಆದೇಶ ಪತ್ರ ನೀಡಿ, ಸನ್ಮಾನಿಸಲಾಯಿತು.
ನಂತರ ಶೇಖನಬಿಸಾಬ್ ಮಾತ ನಾಡಿ, ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧನಾಗಿ, ಜೆಡಿಎಸ್ ಪಕ್ಷವನ್ನು ಬಲ ಪಡಿಸಲು ಹಗಳಿರುಳು ಶ್ರಮಿಸುತ್ತೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಸಲೀಂ ಬೆಗ್, ಇಬ್ರಾಹಿಂ ಖಾಜಸಾಬ್, ನಾರಾಯಣ ಪವರ್, ಅನ್ವರ್ ತಾರೀಫ್, ಶಬ್ಬಿರ್ ಹುಸೇನ್,ವೆಂಕಟೇಶ್ ಚಲುವಾದಿ, ದುರ್ಗಾ ಪ್ರಸಾದ್ ಇದ್ದರು.