ಗಂಗಾವತಿ: ‘ಶ್ರೀಚನ್ನಬಸವಸ್ವಾಮಿ ತಾತನವರ 75ನೇ ಪುಣ್ಯತಿಥಿಯ ದಿನ ಫೆ.28 ರಂದು ಚನ್ನಬಸವಸ್ವಾಮಿ ಕಲಾಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದೆ’ ಎಂದು ಶ್ರೀಚನ್ನಮಲ್ಲಿಕಾರ್ಜುನ ಸಮಿತಿಯ ಟ್ರಸ್ಟಿ ಶಂಕರಗೌಡ ಹೊಸಳ್ಳಿ ತಿಳಿಸಿದರು.
ನಗರದ ಬನ್ನಿಗಿಡದ ಕ್ಯಾಂಪ್ನಲ್ಲಿರುವ ಕಲಾ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ನೂತನ ರಂಗಮಂದಿರ ನಿರ್ಮಾಣದಿಂದ ಈ ಭಾಗದ ಬಹುದಿನಗಳ ಕನಸು ನನಸಾಗಿದೆ. ಶ್ರೀಚನ್ನಮಲ್ಲಿಕಾರ್ಜುನ ಮಠ ಹಾಗೂ ಭಕ್ತರ ದೇಣಿಗೆಯಲ್ಲಿಯೇ ವಿನೂತನ ರಂಗಮಂದಿರ ನಿರ್ಮಿಸಲಾಗಿದೆ. ವೃತ್ತಿ ರಂಗಭೂಮಿ ಕಲಾವಿದರಿಗೆ ವಿನಾಯಿತಿ ದರದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಕಲಾ ಮಂದಿರದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಫೆ.28 ರಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಲಾ ಮಂದಿರ ಉದ್ಘಾಟಿಸಲಿದ್ದಾರೆ. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶಾಸಕ ಪರಣ್ಣ ಮುನವಳ್ಳಿ ಹಾಗೂ ಸಂಸದ ಸಂಗಣ್ಣ ಕರಡಿ ಭಾಗವಹಿಸಲಿದ್ದಾರೆ’ ಎಂದರು.
ಫೆ.29 ರಂದು ರಾತ್ರಿ 9 ಗಂಟೆಗೆ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಹೇಮರೆಡ್ಡಿ ಮಲ್ಲಮ್ಮ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದರು.
ಚನ್ನಮಲ್ಲಿಕಾರ್ಜುನ ಸಮಿತಿಯ ಟ್ರಸ್ಟಿಗಳಾದ ಹೊಸಳ್ಳಿ ರಾಮಲಿಂಗಪ್ಪ, ಜೆ.ಮಹಾಂತೇಶ, ಸಿದ್ದನಗೌಡ ವಕೀಲ, ಡಾ.ಶಶಿಧರ, ಶುಗ್ರಪ್ಪ ವಲ್ಕದಿನ್ನಿ, ಚಂದ್ರೇಗೌಡ ಪೊಲೀಸ್ ಪಾಟೀಲ ಹಾಗೂ ಶರಣಪ್ಪ ಬೂದಗುಂಪ ಇದ್ದರು.