ವಡ್ಡರಹಟ್ಟಿ (ಗಂಗಾವತಿ): ಎರಡನೇ ಹಂತದ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ಅವರು ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಸಲುವಾಗಿ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಮೊದಲಿಗೆ ನಮ್ಮ ತಾಲ್ಲೂಕಿನಲ್ಲಿ ವಡ್ಡರಹಟ್ಟಿ, ಚಿಕ್ಕಜಂತಕಲ್, ಸಂಗಾಪುರ ಹಾಗೂ ಮಲ್ಲಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಮನೆ-ಮನೆ ಸಮೀಕ್ಷೆ ಮಾಡುವ ಸಮೀಕ್ಷೆದಾರರು ಕಡ್ಡಾಯವಾಗಿ ತಮಗೆ ನೀಡಿರುವ ಪ್ರಶ್ನಾವಳಿಗಳಲ್ಲಿ ಮಾಹಿತಿ ದಾಖಲಿಸಬೇಕು ಎಂದರು.
ನಂತರ ಸಮೀಕ್ಷೆದಾರರಿಗೆ ಸಾಮಗ್ರಿ ವಿತರಣೆ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ಕುರುಡಿ, ಕಾರ್ಯದರ್ಶಿ ಈಶಪ್ಪ, ಐಇಸಿ ಸಂಯೋಜಕ ಶಿವಕುಮಾರ್.ಕೆ ಹಾಗೂ ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.