ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರದ ವೇದಿಕೆ ಕಾರ್ಯಕ್ರಮಗಳು ಮುಗಿದ ಬಳಿಕ ಅದ್ದೂರಿಯಾಗಿ ನಡೆದ ಮದ್ದು ಸುಡುವ ಕಾರ್ಯಕ್ರಮ ಕಣ್ಮನ ಸೆಳೆಯಿತು.
ಸಿದ್ಧೇಶ್ವರಮೂರ್ತಿ ಗವಿಮಠವನ್ನು ತಲುಪುತ್ತಿದ್ದಂತೆ ಆಕಾಶದ ತುಂಬೆಲ್ಲ ಬೆಳಕಿನ ರಾಶಿಯೇ ಹರಿದಾಡಿತು. ಗವಿಮಠದ ಹೊರಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಭಕ್ತರು ಸಾಕ್ಷಿಯಾದರು. ಕೊನೆಯಲ್ಲಿ ‘ಗವಿಸಿದ್ಧೇಶ್ವರ, ಗವಿಸಿದ್ಧೇಶ್ವರ...‘ ಎನ್ನುವ ಘೋಷಣೆಗಳು ಮೊಳಗಿದವು.
ಗವಿಸಿದ್ಧೇಶ್ವರ ಮಹಾರಥೋತ್ಸವ ನಿರ್ವಿಘ್ನವಾಗಿ ನಡೆದ ಸಂಕೇತವಾಗಿ ಪ್ರತಿ ವರ್ಷವೂ ಮದ್ದು ಸುಡುವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಜಾತ್ರೆಯ ವಿಜಯೋತ್ಸವ ಸಂಕೇತವೂ ಆಗಿದೆ.