ಹನುಮಸಾಗರ: ಕುಷ್ಟಗಿ–ಬಾದಾಮಿ ಹೆದ್ದಾರಿ ವಿಸ್ತರಣೆ ಕಾರಣ ಹನುಮನಾಳ ಗ್ರಾಮದಲ್ಲಿ ವ್ಯಾಪಾರಿಗಳು ಗೂಡಂಗಡಿಗಳನ್ನು ತಾವೇ ತೆರವು ಮಾಡಿದರು.
ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಬಹುತೇಕ ಗ್ರಾಮಗಳ ವ್ಯಾಪಾರಿಗಳು ಈಗಾಗಲೇ ಅಂಗಡಿ ತೆರವು ಮಾಡಿ ಕಾಮಗಾರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಆದರೆ ಹನುಮನಾಳ ಗ್ರಾಮದ ವ್ಯಾಪಾರಸ್ಥರು ಮಾತ್ರ ಈ ಅಂಗಡಿಗಳೇ ನಮ್ಮ ಬದುಕಿಗೆ ಆಧಾರವಾಗಿವೆ. ಅಂಗಡಿ ತೆರವುಗೊಳಿಸಿದರೆ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹಿಂದೇಟು ಹಾಕಿದ್ದರು.
ಈಚೆಗೆ ಶಾಸಕ ಅಮರೇಗೌಡ ಬಯ್ಯಾಪುರ ಗ್ರಾಮಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಮನವೊಲಿಸಿದ್ದರು. ಕಾರಣ ರಸ್ತೆಬದಿ ಅಂಗಡಿ ಹೊಂದಿದ್ದ ವ್ಯಾಪಾರಸ್ಥರು ಎರಡು ದಿನಗಳಿಂದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಜನ ಹೇಳಿದರು.