ಕೊಪ್ಪಳ: ಕಾವ್ಯದ ಹಸ್ತಪ್ರತಿಗೆ ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಈ ಬಾರಿ ದಾವಣಗೆರೆಯ ಡಾ. ಮಹಾಂತೇಶ ಪಾಟೀಲ ಹಾಗೂ ಹಾಸನ ಜಿಲ್ಲೆಯ ಮಮತಾ ಅರಸೀಕೆರೆ ಆಯ್ಕೆಯಾಗಿದ್ದಾರೆ.
ಮಹಾಂತೇಶ ಅವರ 'ಚಲಿಸುವ ಮೋಡಗಳು' ಮತ್ತು ಮಮತಾ ಅವರ 'ನೀರ ಮೇಲಿನ ಮುಳ್ಳು' ಹಸ್ತಪ್ರತಿಗಳಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ತಲಾ ₹6,000 ನಗದು ಹಾಗೂ ಫಲಕ ಒಳಗೊಂಡಿದೆ.
ಕೊಪ್ಪಳದಲ್ಲಿ ಅ. 16ರಂದು ನಡೆಯುವ 'ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ'ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಮತ್ತು ಸಾಹಿತಿ ಎಚ್.ಎಸ್. ಪಾಟೀಲ ಅವರು ತೀರ್ಪುಗಾರರಾಗಿದ್ದರು.