ಯಲಬುರ್ಗಾ: ದ್ವಿಚಕ್ರ ವಾಹನ ಚಾಲನೆ ಮಾಡುವಾಗ ರಸ್ತೆ ಮೇಲೆ ಮೊಲ ಅಡ್ಡ ಬಂದ ಕಾರಣ ತಾಲ್ಲೂಕಿನ ಸಂಗನಾಳ ಗ್ರಾಮದ ಹತ್ತಿರ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ. ಮತ್ತೊಬ್ಬರನ್ನು ತೀವ್ರ ಗಾಯವಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರನ್ನು ಕುಕನೂರಿನ ಮಾಬುಸಾಬ ದಸ್ತಗಿರಸಾಬ ಗುಡಿಹಿಂದಿಲ್ (55) ಎಂದು ಗುರುತಿಸಲಾಗಿದೆ. ಅವರು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕುಕನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದರು.
ಯಲಬುರ್ಗಾದಿಂದ ಸಂಗನಾಳ ಮಾರ್ಗವಾಗಿ ಕುಕನೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮೊಲ ಅಡ್ಡಬಂದು ಗಾಲಿಯಲ್ಲಿ ಸಿಲುಕಿಕೊಂಡಿದೆ. ನಿಯಂತ್ರಣತಪ್ಪಿ ಸ್ಕೂಟಿ ಮುಗಿಸಿಬಿದ್ದಿದೆ.
ಸವಾರರು ಇಬ್ಬರು ನೆಲಕ್ಕೆ ಬಿದ್ದಾಗ ತಲೆಗೆ ಬಲವಾದ ಪಟ್ಟುಬಿದ್ದ ಪರಿಣಾಮ ಒಬ್ಬರು ಮೃತಪಟ್ಟರೆ, ಮತ್ತೊಬ್ಬ ಸವಾರ ಚಂದ್ರಶೇಖರ ಎಂಬುವರಿಗೂ ಬಲವಾದ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.