ಗಂಗಾವತಿ: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಕೆಲ ಜಾತಿವಾದಿ ಕಿಡಿಗೇಡಿಗಳು ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಸಿ ಮಾತನಾಡಿ,‘ಖಾಸಗಿ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿಯನ್ನು ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಜನರು ಮೆಚ್ಚಿಕೊಂಡಿದ್ದಾರೆ. ಆದರೆ, ಇದನ್ನು ಸಹಿಸಿದ ಕೆಲ ಜಾತಿವಾದಿ, ಕಿಡಿಗೇಡಿಗಳು ಧಾರಾವಾಹಿಯನ್ನು ನಿಲ್ಲಿಸುವಂತೆ ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿದರು.
ಸಮಾಜದಲ್ಲಿ ಸಾಮರಸ್ಯ ಕದಡುವ ಕೃತ್ಯಕ್ಕೆ ಕೈ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಸರ್ಕಾರ ಈ ಕುರಿತು ತನಿಖೆ ನಡೆಸಬೇಕು. ಜತೆಗೆ ವಾಹಿನಿಯ ಮುಖ್ಯಸ್ಥರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇನೆ, ಕಲ್ಯಾಣ ಕರ್ನಾಟಕ ಜನಾಂದೋಲನ ವೇದಿಕೆ, ಅಂಬೇಡ್ಕರ್ ಪ್ರಜಾ ಸೈನ್ಯ ರಾಜ್ಯ ಸಮಿತಿಯ ವತಿಯಿಂದ ಉಪತಹಶೀಲ್ದಾರ್ ಮಂಜುನಾಥ್ ನಂದನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಪ್ರಮುಖರಾದ ಅನೋಜಿರಾವ್, ಜಿ.ಹಂಪೇಶ್ ಹರಿಗೋಲ, ದುರುಗಪ್ಪ ಐಹೊಳೆ, ಮಲ್ಲೇಶ ಗಿಣಿಮೋತಿ, ದುರುಗೇಶ್ ದೊಡ್ಡಮನಿ, ಶಿವಪ್ಪ ಹಿರೇವಡ್ರಕಲ್, ವೀರಭದ್ರ ಗಿಣಿಮೋತಿ, ಯಮನೂರ ಕಟ್ಟಿಮನಿ, ಹನುಮಂತ ನಾಯಕ, ಮುದ್ದಣ್ಣ ನಾಯಕ, ಯಮನೂರ ನಾಯಕ, ಈಶ್ವರ ಲಂಬಾಣಿ ಹಾಗೂ ಹನುಮಂತ ಇದ್ದರು.