ಕೊಪ್ಪಳ: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅನ್ನು ನಗರದಲ್ಲಿ ಭಾನುವಾರ ಮುಸ್ಲಿಂ ಸಮಾಜದವರು ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದರು.
ಇಲ್ಲಿನ ನಗರಸಭೆ ಸಮೀಪದ ಈದ್ಗಾ ಮೈದಾನ ಹಾಗೂ ಅದರ ಪಕ್ಕದ ಬಿ.ಸಿ. ಪಾಟೀಲ ರಸ್ತೆಯುದ್ದಕ್ಕೂ ಬೆಳಿಗ್ಗೆ ಸಾವಿರಾರು ಜನ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಿರಿಯರು, ಮಕ್ಕಳು ಸೇರಿದಂತೆ ಎಲ್ಲ ಮುಸ್ಲಿಮರು ಹೊಸ ಬಟ್ಟೆ ಧರಿಸಿ ನಮಾಜ್ ಮಾಡಿದರು. ಹುಲಿಕೆರೆ ಪಕ್ಕದ ಈದ್ಗಾ ಮೈದಾನದಲ್ಲಿಯೂ ಹಲವರು ಪ್ರಾರ್ಥನೆ ಸಲ್ಲಿಸಿದರು.
ನಮಾಜ್ ನಂತರ ಪರಸ್ಪರ ಅಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲಾ ಕಡೆಯೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನೂ ಕೆಲವರು ತಮ್ಮ ಹತ್ತಿರದ ಮಸೀದಿ ಬಳಿ ನಮಾಜ್ ಮಾಡಿದರು. ಬಳಿಕ ತಮ್ಮ ಸ್ನೇಹಿತರು ಹಾಗೂ ಬಂಧುಗಳ ಮನೆಗೆ ತೆರಳಿ ಹಬ್ಬದ ಶುಭಾಶಯ ಹೇಳಿದರು. ಕೆಲವರು ಕುರ್ಬಾನಿ (ಬಲಿ) ನೆರೆಯವರಿಗೆ ಹಂಚಿದರು. ಇನ್ನೂ ಕೆಲವರು ಸ್ನೇಹಿತರನ್ನು ಮನೆಗೆ ಕರೆದು ಸಿಹಿ ಪದಾರ್ಥ ಶಿರ್ ಕುರ್ಮಾ ನೀಡಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಅವರು ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರಿಗೆ ಹಬ್ಬದ ಶುಭಾಶಯ ಕೋರಿದರು.
ಸನ್ಮಾನ: ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಹಾಗೂ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಬಕ್ರೀದ್ ಪ್ರಯುಕ್ತ ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ಮಾಬೂಸಾಬ್ ಹೀರಾಳ್, ಇಮಾಮ ಸಾಬ್ ತಟಗಾರ್, ಬಾಷಾ ಹಿರೇಮನಿ, ಮೆಹಬೂಬ್ ಬದಾಮಿ, ಷರೀಫ್ ಸಾಬ್, ಹೀರಾಳ್ ಹುಸೇನಸಾಬ್ ನಗರಚಿ, ಶಬ್ಬೀರ್ ಹೊಳಗುಂದಿ ಪಾಲ್ಗೊಂಡಿದ್ದರು.