ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಭಾನುವಾರ ಸಂಜೆ ಸೇರಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಎರಡು ವರ್ಷಗಳ ಬಳಿಕ ’ಅಜ್ಜನ ಜಾತ್ರೆ’ ಅತ್ಯಂತ ಸಂಭ್ರಮದಿಂದ ನೆರವೇರಿತು.
ಪಾದಗಟ್ಟಿ ಮುಟ್ಟಿ ಬರುವ ಮಹಾರಥೋತ್ಸವದ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಭಕ್ತರು ಬೆಳಗಿನ ಜಾವದಿಂದಲೇ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿದ್ದರು. ಅನೇಕರು ಚಕ್ಕಡಿ, ಟ್ರ್ಯಾಕ್ಟರ್ಗಳ ಮೂಲಕ ಬಂದರೆ, ಇನ್ನೂ ಕೆಲವರು ಪಾದಯಾತ್ರೆ ಮೂಲಕ ಅಜ್ಜನ ಮಠ ತಲುಪಿದರು.
ಈಶಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಣ್ಣು ಹಾಯಿಸಿದಷ್ಟೂ ದೂರ ಕಾಣುತ್ತಲೇ ಇದ್ದ ಜನರಿಗೆ ಕೈ ಮುಗಿದು, ತಲೆ ಬಾಗಿ ನಮಸ್ಕರಿಸಿದರು. ತೇರು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆಯೇ ನಿಲ್ಲಿಸುವಂತೆ ಹೇಳಿದ ಸ್ವಾಮೀಜಿ; ಇತ್ತೀಚೆಗೆ ನಿಧನರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಹೇಳಿದರು. ಸ್ವಾಮೀಜಿ ಈ ಮಾತು ಹೇಳುತ್ತಿದ್ದಂತೆ ಲಕ್ಷಾಂತರ ಜನ ಮೌನಕ್ಕೆ ಜಾರಿದರು.
ಜಗ್ಗಿ ವಾಸುದೇವ್ ಮಾತನಾಡಿ ‘ಜಾತ್ರೆಯಲ್ಲಿ ಭಕ್ತಿಯ ಸಾಗರವೇ ಹರಿದಿದೆ. ನದಿಯಂತೆ ಭಕ್ತರು ಹರಿದು ಬಂದಿದ್ದಾರೆ. ಎಷ್ಟೋ ಜನ ಸಾಧುಸಂತರು ಭೂಮಿಯಲ್ಲಿ ತಮ್ಮ ಕಾಯಕದ ಮೂಲಕ ನೆನಪುಗಳನ್ನು ಉಳಿಸಿ ಹೋಗಿದ್ದಾರೆ. ಅಂಥವರ ನೆನಪಿನ ರೂಪದಲ್ಲಿಯೇ ನೀವೆಲ್ಲರೂ ಇಲ್ಲಿ ಸೇರಿದ್ದೀರಿ’ ಎಂದಾಗ ಭಾರಿ ಕರತಾಡನ ವ್ಯಕ್ತವಾಯಿತು.
ಸವಿ: ಭಕ್ತರು 15ಲಕ್ಷಕ್ಕೂ ಹೆಚ್ಚು ಜೋಳದ ರೊಟ್ಟಿ, ಏಳು ಲಕ್ಷ ಶೇಂಗಾ ಹೋಳಿಗೆ, 300 ಕ್ವಿಂಟಲ್ ಸಿಹಿ ಮಾದಲಿ ಸೇರಿದಂತೆ ಅನೇಕ ಪದಾರ್ಥಗಳನ್ನು ದಾನವಾಗಿ ನೀಡಿದ್ದಾರೆ.