ಯಲಬುರ್ಗಾ: ತಾಲ್ಲೂಕಿನ ತುಮ್ಮರಗದ್ದಿ ಗ್ರಾಮದಲ್ಲಿ ಮೊಹರಂ ಹಾಗೂ ಗಣೇಶೋತ್ಸವ ಪ್ರಯುಕ್ತ ಶಾಂತಿ ಸಭೆ ಆಯೋಜಿಸಲಾಗಿತ್ತು.
ನೇತೃತ್ವ ವಹಿಸಿದ್ದ ಪೊಲೀಸ್ ಸಿಬ್ಬಂದಿ ತಮ್ಮನಗೌಡ ಪೂಜಾರ ಮಾತನಾಡಿ,‘ಗಣೇಶೋತ್ಸವ ಹಾಗೂ ಮೊಹರಂ ಒಟ್ಟಿಗೆ ಬಂದಿವೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸೌಹಾರ್ದಯುತವಾಗಿ ಆಚರಿಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆಚರಣೆಗೆ ಮುಂದಾಗಬೇಕು. ಯಾವುದೇ ರೀತಿಯ ಮೆರವಣಿಗೆ ಹಾಗೂ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸಾಧ್ಯವಾದಷ್ಟು ಕಡಿಮೆ ಜನರು ಸೇರಿ ಆಚರಿಸಬೇಕು’ ಎಂದರು.
ಮೊಹರಂ ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ಪ್ರತಿಷ್ಠಾಪಿಸುವ ಅಲಾಯಿ ಮೂರ್ತಿಗಳನ್ನು ಯಾವುದೇ ರೀತಿಯ ಮೆರವಣಿಗೆ ಮಾಡದೇ ಅಲ್ಲಿಯೇ ಮುಕ್ತಾಯಗೊಳಿಸಬೇಕು. ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆ, ಗದ್ಧಲ ಅಥವಾ ಇನ್ನಿತರ ಅಹಿತಕರ ಘಟನೆಗಳಿಗೆ ಮುಂದಾದರೆ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾ.ಪಂ ಮಾಜಿ ಸದಸ್ಯ ಕಳಕನಗೌಡ ಪಾಟೀಲ್, ಚಂದ್ರಪ್ಪ ಬಡಿಗೇರ, ದುರಗಪ್ಪ ನಡುಲಮನಿ, ಕೆಂಚಪ್ಪ ಕಂಬಳಿ, ನಿಂಗಪ್ಪ ಈಳಗೇರ, ಉಮೇಶಪ್ಪ ಹಳ್ಳಿಗುಡಿ, ವೀರಭದ್ರಪ್ಪ ಚಿಕ್ಕೊಪ್ಪ, ದ್ಯಾಮಣ್ಣ ದಳಪತಿ,ವೀರಭದ್ರಪ್ಪ ಕುದ್ರಿಕೋಟಗಿ ಹಾಗೂ ದೇವಪ್ಪ ಈಳಿಗೇರ ಇದ್ದರು.