ಗಂಗಾವತಿ (ಕೊಪ್ಪಳ): ತುಂಗಭದ್ರಾಜಲಾಶಯದಿಂದ ಬುಧವಾರ ಬೆಳಿಗ್ಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕೃಷ್ಣದೇವರಾಯನ ಸಮಾಧಿ ಮುಳುಗಡೆಯಾಗಿದೆ. ನವವೃಂದಾವನಕ್ಕೆ ತೆರಳುವ ಸಂಪರ್ಕ ಮಾರ್ಗ ಕಡಿತಗೊಂಡಿದೆ.
ಸಾಣಾಪುರ ಗ್ರಾಮದ ಬಳಿ ನಿರ್ಮಾಣ ಮಾಡಲಾಗುತ್ತಿರುವ ವಿಜಯನಗರದ ಕಾಲುವೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಕಾಲುವೆ ನೀರು ನದಿಗೆ ಹರಿಸಲು ಜಾಕ್ ವೆಲ್ ಡೋರ್ ಕಿತ್ತು ಹಾಕಲಾಗಿದೆ.
ಈಗಾಗಲೇ ಜಿಲ್ಲಾಡಳಿತ ಮತ್ತು ಗಂಗಾವತಿ ತಾಲ್ಲೂಕು ಆಡಳಿತ ಸಾರ್ವಜನಿಕರು ನದಿಪಾತ್ರಕ್ಕೆ ತೆರಳದಂತೆ ಗ್ರಾಮ ಪಂಚಾಯ್ತಿ ಮೂಲಕ ಗ್ರಾಮಗಳಲ್ಲಿ ಡಂಗೂರದ ಮೂಲಕ ಜಾಗೃತಿ ಮೂಡಿಸುತ್ತಿದೆ. ಸಾಮಾಜಿಕ ತಾಣಗಳ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.
ನೀರಿನ ಹರಿವು ಹೆಚ್ಚಾಗಿರುವ ಕಾರಣ ಗಂಗಾವತಿ-ಕಂಪ್ಲಿ ನಡುವಿನ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಆದ್ದರಿಂದ ವಾಹನಗಳನ್ನು ಕಡೆಬಾಗಿಲು-ಬುಕ್ಕಸಾಗರ ಸೇತುವೆ ಮಾರ್ಗವಾಗಿ ತೆರಳುವಂತೆ ಕೊಪ್ಳಳ ಎ.ಸಿ ಬಸವಣ್ಣೆಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ.