ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮಸ್ಥರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹುಸೇನಪ್ಪ.ಕೆ ಮಾತನಾಡಿ,‘ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮಸ್ಥರು ಉದ್ಯೋಗ ಖಾತ್ರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಲಸ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಕೆಲಸದ ವೇಳೆ ಕೂಲಿಕಾರರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗಲು ಬಳಕೆ ಮಾಡಲಾದ ಟ್ರ್ಯಾಕ್ಟರ್ ಬಾಡಿಗೆಯನ್ನು ಸಹ ನೀಡಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುವ ಇಂಥ ಕೆಲಸವನ್ನು ಕೂಲಿಕಾರರ ಸಂಘ ಖಂಡಿಸುತ್ತದೆ ಎಂದರು.
ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮಸ್ಥರಿಗೆ ಉದ್ಯೋಗ ಖಾತ್ರಿ ಕೆಲಸ ನೀಡಿ, ಕಾಯಕ ಬಂಧು ಮಿತ್ರರಿಗೆ ಎನ್.ಎಂ.ಆರ್ ತೆಗೆದುಕೊಡಬೇಕು ಎಂದು ಒತ್ತಾಯಿಸಿ ವಡ್ಡರಹಟ್ಟಿ ಗ್ರಾ.ಪಂ ಪಿಡಿಒ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಸವರಾಜ, ತಾಲ್ಲೂಕು ಕಾರ್ಯದರ್ಶಿಗಳಾದ ಬಾಳಪ್ಪ ಹುಲಿಹೈದರ, ಗ್ರಾಮಸ್ಥರಾದ ನಾಗಮ್ಮ, ಫಕಿರಪ್ಪ, ಚಾಂದ್ ಬೀ, ತೋಟಪ್ಪ, ಅಯ್ಯಣ್ಣ, ಬಸವರಾಜ ಹಾಗೂ ಕೇಶವ್ವ ವಡ್ಡರಹಟ್ಟಿ ಇದ್ದರು.