ನವದೆಹಲಿ:ಐಎನ್ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಆರೋಪ ಹೊತ್ತಿರುವ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.
ಕಾರ್ತಿ ಚಿದಂಬರಂ ಅವರನ್ನು ಮಾರ್ಚ್ 20ರವರೆಗೆ ಬಂಧನಕ್ಕೊಳಪಡಿಸುವಂತಿಲ್ಲ ಎಂದು ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಪ್ರಕರಣದಿಂದ ಮಧ್ಯಂತರ ತಡೆ ನೀಡದ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕಾರ್ತಿ ಚಿದಂಬರಂ ಗುರುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಅವರನ್ನು ಸಿಬಿಐ ಫೆಬ್ರುವರಿ 28ರಂದು ಚೆನ್ನೈಯಲ್ಲಿ ಬಂಧಿಸಿತ್ತು. ಬಳಿಕ ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸಲಾಗಿತ್ತು.
ಪಿ. ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ, ಪೀಟರ್ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಒಡೆತನದ ಐಎನ್ಎಕ್ಸ್ ಮಾಧ್ಯಮ ಸಮೂಹಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ (ಎಫ್ಐಪಿಬಿ) ನಿರಾಕ್ಷೇಪಣಾ ಪತ್ರ ಕೊಡಿಸಿದ ಆರೋಪ ಕಾರ್ತಿ ಅವರ ಮೇಲಿದೆ.