ಕಾರಟಗಿ: ರಸ್ತೆ, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡವರಿಗೆ ಪೊಲೀಸರು, ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಪುರಸಭೆ ಕಚೇರಿಯಿಂದ ವಿಶೇಷ ಎಪಿಎಂಸಿವರೆಗೆ ನವಲಿ ಹಾಗೂ ಬೂದಗುಂಪಾ ರಸ್ತೆಯ ಎರಡೂ ಬದಿಯ ಚರಂಡಿ ಮೇಲೆ ಅಂಗಡಿ, ಜೋಪಡಿ, ಡಬ್ಬಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರಿಗೆ ಸೂಚಿತ ಜಾಗದವರೆಗೂ ಹಿಂದೆ ಸರಿದುಕೊಳ್ಳಬೇಕು. ಇಲ್ಲ ತೆರವುಗೊಳಿಸಬೇಕು ಎಂದು ಸೂಚಿಸಿದರು. ನಿರ್ಲಕ್ಷ್ಯ ವಹಿಸಿದರೆ ಇಲಾಖೆಯಿಂದಲೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಹೃದಯ ಭಾಗವಾಗಿರುವ ಕನಕದಾಸ ವೃತ್ತದಲ್ಲಿ ನಾಲ್ಕೂ ರಸ್ತೆಗಳು ಸೇರುತ್ತವೆ. ಮುಖ್ಯ ರಸ್ತೆಯವರೆಗೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ದಟ್ಟಣೆಯಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.
ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಆರ್.ಎಸ್.ಉಜ್ಜನಿಕೊಪ್ಪ, ಸಬ್ ಇನ್ಸ್ಪೆಕ್ಟರ್ಗಳಾದ ಲಕ್ಕಪ್ಪ ಬಿ. ಅಗ್ನಿ, ಮಲ್ಲಪ್ಪ ಕೆ. ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ನೇತೃತ್ವದಲ್ಲಿ ಜನಪ್ರತಿನಿಧಿಗಳು ವಿವಿಧೆಡೆ ಸಂಚರಿಸಿ, ಮುಖ್ಯ ರಸ್ತೆಯಿಂದ 10 ಅಡಿ ಒಳಗೆ ವ್ಯಾಪಾರ ಮಾಡಿಕೊಳ್ಳಬೇಕು.
ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಯಾಗುವಂತೆ ನೋಡಿಕೊಳ್ಳಬೇಕು.
ಎರಡು ದಿನಗಳಲ್ಲಿ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಒತ್ತುವರಿ ತೆರವಿಗೆ ಮುಂದಾಗಲಾಗುವುದು ಎಂದು ತಾಕೀತು ಮಾಡಿದರು. ಪುರಸಭೆ ಸಿಬ್ಬಂದಿ ಪ್ರತಿ ಅಂಗಡಿಗಳ ಬಳಿ ತೆರಳಿ ಅಳತೆ ಮಾಡಿ ನಿಗದಿತ ಸ್ಥಳ ನಿಗದಿಪಡಿಸಿದರು.