ಹನುಮಸಾಗರ: ’ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರಿಗೆ ಮಾಹಿತಿ ಕೊರತೆ ಹಾಗೂ ಆರ್ಥಿಕ ತೊಂದರೆ ಕಾರಣಕ್ಕೆ ತಮ್ಮ ಕಲೆ ಪ್ರದರ್ಶನ ಮಾಡಲು ಅಸಹಾಯಕರಾಗಿದ್ದು, ಸಂಘಟನೆ ಅಂತಹ ಕಲಾವಿದರತ್ತ ಗಮನಹರಿಸಬೇಕಾಗಿದೆ‘ ಎಂದು ರಂಗ ಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.
ಮಂಗಳವಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಹೋಬಳಿ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲ್ಲೂಕು ಸಂಘದ ಕಾರ್ಯಚಟುವಟಿಕೆಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ರಾಜ್ಯ ಸಂಘದ ಉಪಾಧ್ಯಕ್ಷ ಶರಣಪ್ಪ ವಡಗೇರಿ ಮಾತನಾಡಿ, ’ಜನಪದ, ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಕಲಾವಿದರಿಗೆ ಸಂಬಂಧಿಸಿದ ಸಂಘಟನೆ ಇದಾಗಿದೆ. ಕಲಾವಿದರಿಗೆ ಸರ್ಕಾರದಿಂದ ದೊರಕಬಹುದಾದ ನೆರವನ್ನು ಸಂಘಟನೆ ಅರ್ಹ ಕಲಾವಿದರನ್ನು ಹುಡುಕಿ ಅವರಿಗೆ ತಲುಪಿಸುವ ಕಾರ್ಯ ಮಾಡುತ್ತದೆ‘ ಎಂದರು.
ಪದಾಧಿಕಾರಿಗಳು:ಇದೇ ವೇಳೆ ಸಂಗಮೇಶ ಮನ್ನೇರಾಳ, ಯಲ್ಲಪ್ಪ ಭಜಂತ್ರಿ, ಮಲ್ಲಯ್ಯ ಕೋಮಾರಿ, ಶ್ರೀಶೈಲ ಕಲಾಲಬಂಡಿ, ದುರುಗೇಶ ಭಜಂತ್ರಿ, ವೀರೇಶ ಕಲ್ಲಗೋನಾಳ, ಮಾನಪ್ಪ ಬಡಿಗೇರ, ಸುನೀಲ ಬಸುದೆ, ಲೋಕಪ್ಪ ಕೋನಾಪೂರ ಅವರನ್ನು ಹೋಬಳಿ ಘಟಕದ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.